ದಾವಣಗೆರೆ: ದುಗ್ಗಮ್ಮ ಜಾತ್ರೆ ವೇಳೆ ಬೇವಿನುಡುಗೆ, ಉರುಳು ಸೇವೆ, ದೀಡು ನಮಸ್ಕಾರದ ಹರಕೆ ತೀರಿಸುವುದು ಸಾಮಾನ್ಯವಾಗಿತ್ತು. ಬರಿಮೈಮೇಲೆ ಬೇವಿನುಡುಗೆ ತೊಟ್ಟು ಹರಕೆ ತೀರಿಸುವುದು ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಬ್ಬಂದಿ ಅಂತಹ ಪ್ರಕರಣಗಳಲ್ಲಿ ಕೆಲವರಿಗೆ ಬಟ್ಟೆ ಹಾಕಿಸಿ ಕಳಿಸಿದ್ದಾರೆ.
ಬರಿ ಮೈಮೇಲೆ ಬೇವಿನುಡುಗೆ ತೊಟ್ಟಿದ್ದ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ದೇವಸ್ಥಾನ ಬಳಿ ಬಂದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ತಿಳಿಹೇಳಿದ್ದಾರೆ. ಹೀಗೆ ಬರಿ ಮೈಮೇಲೆ ಬೇವಿನುಡುಗೆ ತೊಡುವುದು ನಿಷೇಧಿಸಿದೆ. ಹಾಗಾಗಿ ಬಟ್ಟೆ ಧರಿಸಿ, ಹರಕೆ ತೀರಿಸುವಂತೆ ತೊಟ್ಟವರಿಗೆ ತಿಳಿಹೇಳಿ, ಕಾನೂನಿನ ಬಗ್ಗೆ ವಿವರಿಸಿ, ಮನ ಪರಿವರ್ತಿಸಿದ್ದಾರೆ. ಅಧಿಕಾರಿ, ಸಿಬ್ಬಂದಿಯ ಮಾತಿಗೆ ಸ್ಪಂದಿಸಿದ ಭಕ್ತರು ಬರಿ ಮೈಯಲ್ಲಿ ಬೇವಿನುಡುಗೆ ಉಟ್ಟವರಿಗೆ ಬಟ್ಟೆ ಹಾಕಿಸಿ, ಕಳಿಸಿದ್ದಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.ಜಾತ್ರೆ ಜನಸಾಗರದಲ್ಲಿ ಹೆತ್ತವರಿಂದ ದೂರವಾಗಿದ್ದ ಮಕ್ಕಳನ್ನು ಪಾಲಕರಿಗೆ ತಲುಪಿಸುವ ಕೆಲಸವೂ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ನಡೆಯಿತು. ಅಲ್ಲಲ್ಲಿ ಮೊಬೈಲ್ ಕಳ್ಳರು, ಪಿಕ್ ಪಾಕೆಟ್ ಮಾಡುವವರು, ಸರಗಳ್ಳತನದಂತಹ ಕೆಲ ಪ್ರಕರಣದ ಬಗ್ಗೆ ಕೇಳಿಬಂದಿತು.
- - -* ಇದು ಬೇರೆ ಹಂತದ ಭಕ್ತಿ: ಡಿಸಿ ಗಂಗಾಧರಸ್ವಾಮಿ
ದಾವಣಗೆರೆ: ಭಕ್ತರು ಭಕ್ತಿಪರವಶರಾಗಿ ದೇವಿ ದರ್ಶನಕ್ಕೆ ಬಂದು, ಜಾತ್ರೆ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಜನಸಂದಣಿ ಇರುವಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸ್ ಇಲಾಖೆಯಿಂದ ಡ್ರೋಣ್ ಮೂಲಕ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ದೇವಸ್ಥಾನದ ಸಮೀಪದ ಸ್ಥಳದಲ್ಲಿದ್ದೇವೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಪಂ ಸಿಇಒ ಸಹ ಇಲ್ಲಿಯೇ ಇದ್ದು, ರಾತ್ರಿಯಿಂದಲೂ ಇದ್ದೇವೆ ಎಂದರು.
ದಾವಣಗೆರೆ ಹಳೇ ಭಾಗದ ಎಲ್ಲ ದೇವಸ್ಥಾನಗಳಿಗೂ ಅಧಿಕಾರಿಗಳನ್ನು ನಿಯೋಜಿಸಿದ್ದು, ಆ ಎಲ್ಲರೂ ಆಯಾ ಭಾಗದಲ್ಲಿ ನಿಗಾ ವಹಿಸಿದ್ದಾರೆ. ಜನರು ದೇವಿಯ ಆಶೀರ್ವಾದ ಪಡೆಯಬೇಕು. ಉತ್ತಮ ಮಳೆ-ಬೆಳೆಗಳಾಗಿ, ಜನರು ಸುಭಿಕ್ಷವಾಗಿರುವಂತೆ ದೇವಿಗೆ ಪ್ರಾರ್ಥಿಸುತ್ತೇವೆ. ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡೋದು ನಿಷೇಧಿಸಿ, ಆದೇಶ ಹೊರಡಿಸಿದ್ದೇವೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಬೇರೆಯ ಹಂತದ ಭಕ್ತಿ ಇದು. ಪ್ರತಿಯೊಬ್ಬರ ಮುಖದಲ್ಲೂ ಭಕ್ತಿಭಾವನೆ ಇದೆ. ಮೂಢ ಆಚರಣೆ ಇಲ್ಲ ಎಂದು ಅಭಿಪ್ರಾಯಪಟ್ಟರು.- - -
* (ಟಾಪ್ ಕೋಟ್)ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೋತ್ಸವ ಇವತ್ತಿನ ದಿನ ವಿಜೃಂಭಣೆಯಿಂದ ನಡೆದಿದೆ. ಸಂಚಾರ, ಪಾರ್ಕಿಂಗ್, ಬಂದೋಬಸ್ತ್ ಹೀಗೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಆಯ್ದ ಸ್ಥಳಗಳಲ್ಲಿ ಬಂದೋಬಸ್ತ್ ಮಾಡಿದೆ. ಮೂಢನಂಬಿಕೆ, ಪ್ರಾಣಿ ಬಲಿ ನಿಷೇಧ ಹಿನ್ನೆಲೆ ಡಿಸಿ ನೇತೃತ್ವದಲ್ಲಿ ಇಲ್ಲೇ ಇದ್ದು, ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಬಲಿಯಂತಹ ಘಟನೆ ನಡೆದಿಲ್ಲ. ತಾಯಿ ದುಗ್ಗಮ್ಮ ಎಲ್ಲರಿಗೂ ಶುಭ ಮಂಗಳ ತರಲಿ.
- ಡಾ.ಶೇಖರ್ ಎಚ್. ಟೆಕ್ಕಣ್ಣನವರ್, ಜಿಲ್ಲಾ ಎಸ್ಪಿ.- - -
(-ಫೋಟೋಗಳಿವೆ.)