ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬ್ಯಾರಿಕೇಡ್, ಸೂಚನಾ ಫಲಕ ಇಲ್ಲದೇ ಅಪಘಾತಗಳ ಕೇಂದ್ರ ಸ್ಥಾನವಾಗಿದ್ದ ಮುಧೋಳ ನಿಪ್ಪಾಣಿ ಹೆದ್ದಾರಿಯ ಅಷ್ಟಗಿ ಚಿತ್ರಮಂದಿರದ ಮುಂಭಾಗದ ರಸ್ತೆ ವಿಭಜಕ ಸ್ಥಳಕ್ಕೆ ಶಾಸಕ ಸಿದ್ದು ಸವದಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು.

ಮೇ ೨೫ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರವಾಗೋ ಬದಲು ಶಾಪವಾದ ರಸ್ತೆ ವಿಭಜಕ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಶಾಸಕ ಸಿದ್ದು ಸವದಿ, ಸಿಪಿಐ ಆರ್ ಆರ್ ಪಾಟೀಲ್, ಪಿಎಸ್ಐ ಕಿರಣ್ ಸತ್ತಿಗೇರಿ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬ್ಯಾರಿಕೇಡ್ ಹಾಕಿ, ಸೂಚನಾ ಫಲಕ ಅಳವಡಿಸಿ, ರಸ್ತೆ ಬದಿಯಲ್ಲಿ ನಿಂತ ದ್ವಿಚಕ್ರವಾಹನ ತೆರವುಗೊಳಿಸಿದರು. ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸದಂತೆ ಖಡಕ್ ಸೂಚನೆ ನೀಡಿದರು.

ರಸ್ತೆ ವಿಭಜಕಕ್ಕೆ ಯಾವುದೇ ರೀತಿಯ ಸೂಚನಾ ಫಲಕವಾಗಲಿ, ವಿದ್ಯುತ್ ದೀಪದ ಸಿಗ್ನಲ್‌ ಇಲ್ಲದ್ದರಿಂದ ವಾಹನ ಸವಾರರು ರಸ್ತೆ ವಿಭಜಕ ಇರುವುದನ್ನು ಅರಿಯದೇ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಭಾನುವಾರ ರಾತ್ರಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಅಪೋಲೋ ಮೆಡಿಕಲ್ಸ್ ಪಕ್ಕದಲ್ಲಿ ಅಪ್ಪಳಿಸಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮೆಡಿಕಲ್ ಸ್ಟೋರ್ ಒಳಗೆ ನುಗ್ಗಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಬ್ಯಾರಿಕೇಡ್‌ ಅಳವಡಿಸಿ ಸೂಚನಾ ಫಲಕ ಅಳವಡಿಸಿದ್ದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ.