ಧಾರಾಕಾರ ಮಳೆಗೆ ಬ್ಯಾರನ್, ಮನೆ ಕುಸಿತ: 3 ಹಸು ಸಾವು

| Published : May 30 2025, 11:47 PM IST

ಸಾರಾಂಶ

ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಂಬಾಕು ಹದ ಮಾಡುವ ಬ್ಯಾರನ್, ಮನೆ ಕುಸಿತಗೊಂಡು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಹಸುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಅಂಕನಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಂಬಾಕು ಹದ ಮಾಡುವ ಬ್ಯಾರನ್, ಮನೆ ಕುಸಿತಗೊಂಡು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಹಸುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಅಂಕನಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಕೊಪ್ಪಲು ಗ್ರಾಮದ ಅಲ್ತಾಫ್ ಅಹಮದ್ ಹಾಗೂ ಮುಸ್ತಾಕ್ ಅಹಮದ್‌ರಿಗೆ ಸೇರಿದ ತಂಬಾಕು ಹದ ಮಾಡುವ ಬ್ಯಾರೆನ್, ಮನೆ ಹಾಗೂ ಮೂರು ಹಸುಗಳು ದಾರುಣವಾಗಿ ಮೃತಪಟ್ಟು, ನಾಲ್ಕು ಕರುಗಳಿಗೆ ತೀವ್ರ ಗಾಯಗೊಂಡಿದ್ದು, ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಶುಕ್ರವಾರ ಮದ್ಯೆ ರಾತ್ರಿ 2ರ ಸಮಯದಲ್ಲಿ ಹೆಚ್ಚು ರಭಸವಾಗಿ ಸುರಿಯುತ್ತಿದ್ದ ಮಳೆಗೆ ಹಸಿ ಇಟ್ಟಿಗೆಯಿಂದ ನಿರ್ಮಿಸಿದ್ದ ಮನೆ ಹಾಗೂ ಬ್ಯಾರನ್ ಗೋಡೆಗಳ ತೇವಾಂಶ ಹೆಚ್ಚಾಗಿ ಮೊದಲು ಬ್ಯಾರೆನ್ ಗೋಡೆ ಕುಸಿತಗೊಂಡು ಗೋಡೆಯ ಮಣ್ಣು ಹಾಗೂ ಮೇಲ್ಛಾವಣಿ ಕಟ್ಟಿ ಹಾಕಿದ್ದ ಹಸುಗಳ ಮೇಲೆ ಬಿದ್ದು ಹಸುಗಳು ಮೇಲೇಳಲಾಗದೆ ಮಣ್ಣಿನಲ್ಲಿ ಹೂತು ಹೋಗಿ ಸ್ಥಳದಲ್ಲೇ ಮೃತಪಟ್ಟಿವೆ. ಇನ್ನು ಬ್ಯಾರೆನ್ ಹೊಂದಿಕೊಂಡಿರುವ ವಾಸದ ಮನೆ ಕುಸಿಯಲಾರಂಭಿಸಿದ ತಕ್ಷಣ ಮನೆಯಲ್ಲಿ ಮಲಗಿದ್ದವರು ಎಚ್ಚರಗೊಂಡು ಕೊಟ್ಟಿಗೆಯಲ್ಲಿದ್ದ ಎತ್ತು ಸೇರಿದಂತೆ ನಾಲ್ಕು ಕರು ಕೋಳಿ ಹಾಗೂ ಪಾರಿವಾಳಗಳನ್ನು ರಕ್ಷಣೆ ಮಾಡಿದ್ದಾರೆ. ಕಂದಾಯ, ಪಶುಪಾಲನಾ ಇಲಾಖೆ, ತಂಬಾಕು ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.