ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಿಂಗಳ ಕಾಲ ರಾಜ್ಯಾದ್ಯಂತ ಸಂಚರಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವರಥ ಯಾತ್ರೆಗೆ ಸಚಿವ ಶಿವಾನಂದ ಪಾಟೀಲ ಬಸವ ಜನ್ಮಸ್ಮಾರಕದಿಂದ ಚಾಲನೆ ನೀಡಿದರು. ರಥಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸುಮಂಗಲೆಯರು ತಲೆ ಮೇಲೆ ಬಸವ ಗ್ರಂಥ ಹೊತ್ತು ಸಾಗಿದರು.ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ಹಾವೇರಿಯ ಪುರಂದರ ಕಲಾ ತಂಡ, ಡೊಳ್ಳು ವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಬಸವ ರಥಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ, ಡಾ.ಬಿ.ಆರ್ ಅಂಬೇಡ್ಕರ್, ಬಸವೇಶ್ವರ ವೃತ್ತದ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆ ತಲುಪಿತು.ಮೆರವಣಿಗೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಜಿ, ನಿಜಗುಣನಂದ ಸ್ವಾಮೀಜಿ, ವಿರಕ್ತಮಠ ಮಠದ ಸಿದ್ಧಲಿಂಗ ಸ್ವಾಮಿಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು, ಭಾಲ್ಕಿಯ ಬಸವಲಿಂಗ ಪಟ್ಟದೇವರು, ತಂಗಡಗಿಯ ಅನ್ನದಾನೇಶ್ವರ ಸ್ವಾಮೀಜಿ, ಅಥಣಿಯ ಚನ್ನಬಸವ ಸ್ವಾಮಿಗಳು, ಮಸಬಿನಾಳದ ಸಿದ್ದರಾಮ ಸ್ವಾಮಿಗಳು, ಡಾ.ಎಸ್.ಎಂ.ಜಾಮದಾರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖಂಡರಾದ ಡಾ.ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಬಾಲಚಂದ್ರ ಮುಂಜಾನೆ, ಶಂಕರಗೌಡ ಬಿರಾದಾರ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ ಸೇರಿದಂತೆ ಮುಂತಾದವರು ಇದ್ದರು.
ಬಾಕ್ಸ್ಅಭಿಯಾನದಿಂದ ಧರ್ಮದ ಬಗ್ಗೆ ಜಾಗೃತಿ: ಜಾಮದಾರ್ ಬಸವನಬಾಗೇವಾಡಿ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ಎಸ್ ಎಂ ಜಾಮದಾರ್ ಹೇಳಿಕೆ.ಬಸವನಬಾಗೇವಾಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಆರಂಭ ಮಾಡಿದ್ದೇವೆ. ಇದು ಜಿಲ್ಲೆಗಳಲ್ಲಿ ಸಂಚಾರ ಮಾಡಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಎಸ್.ಎಂ.ಜಾಮದಾರ್ ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಬಸವಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ನೀಡಿವೆ. ನಾಳೆ ಕಲಬುರ್ಗಿ ಹಾಗೂ ಬೀದರ್ನಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಅಭಿಯಾನ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಭಾಗವೇ ಎಂಬ ಪ್ರಶ್ನೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕಿಂತ ಸಮಾಜದ ಪ್ರಚಾರ ಎಂದು ಭಾವಿಸಬೇಕೆಂದರು. ಲಿಂಗಾಯತ ಸಂಸ್ಕೃತಿಯ ಪ್ರಚಾರ, ಪ್ರಸಾರ ಎಂದು ತಿಳಿದುಕೊಳಬಹುದು. ಇದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಎಂದರೂ ತಪ್ಪಲ್ಲ ಎಂದು ಸ್ಪಷ್ಟನೆ ನೀಡಿದರು. 2018ರಲ್ಲಿ ಕರ್ನಾಟಕ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಆದೇಶ ಮಾಡಿದೆ. ಆದರೆ, ಅದು ಜಾರಿಗೆ ಬರಬೇಕಾದರೆ ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕಿದೆ. ಕೇಂದ್ರ ಸರ್ಕಾರ ಕೆಲವು ಪ್ರಶ್ನೆ ಕೇಳಿದ್ದು, ಅದಕ್ಕೆ ರಾಜ್ಯ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಲಿಂಗಾಯತ ಅಲ್ಪಸಂಖ್ಯಾತ ಧರ್ಮ ಎಂದು ಈ ಹಿಂದೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಹಿಂದೆ ನಡೆದ ಲಿಂಗಾಯತ ಹೋರಾಟ ರಾಜಕೀಯವಾಗಿತ್ತು.ಇವತ್ತು ಧಾರ್ಮಿಕವಾಗಿ ಹೋರಾಟ ನಡೆಯುತ್ತಿದೆ. ಜನರಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿದೆ ಎಂದು ಹೇಳಿದರು.