ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಬಸವ ತತ್ವಗಳ ಪ್ರಸಾರ ಹಾಗೂ ಸಮಾಜದ ಏಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಸವ ಜಯಂತಿ–2026 ಅನ್ನು ಏ.19 ಮತ್ತು 20 ರಂದು ಅರ್ಥಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಬಸವ ಬಳಗಗಳ ಒಕ್ಕೂಟ, ಮೈಸೂರು ನಗರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಸಮಗ್ರ ಸಿದ್ಧತೆ ಕೈಗೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ನಗರ ಪ್ರಚಾರ ಸಮಿತಿಯಿಂದ ಪ್ರಚಾರ ವಾಹನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ನಗರ ಪ್ರಚಾರ ಸಮಿತಿ ಅಧ್ಯಕ್ಷ ಜೀವಧಾರ ಗಿರೀಶ್ ಅವರ ನೇತೃತ್ವದಲ್ಲಿ, ಕುದೇರು ಮಠದ ಕಿರಿಯ ಶ್ರೀಗಳ ಸಮ್ಮುಖದಲ್ಲಿ ಹಾಗೂ ಬಸವ ಜಯಂತಿ ಅಧ್ಯಕ್ಷ ಎಂ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.ಪ್ರಚಾರ ಸಮಿತಿ ಅಧ್ಯಕ್ಷ ಗಿರೀಶ್ ಮಾತನಾಡಿ, ಬಸವಣ್ಣನವರ ಸಂದೇಶವು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅದು ಸಮಗ್ರ ಸಮಾಜದ ಪರಿವರ್ತನೆಗೆ ದಾರಿದೀಪವಾಗಿದೆ. ಈ ಬಾರಿ ಜಯಂತಿಯನ್ನು ಕೇವಲ ಆಚರಣೆಯಾಗಿ ಅಲ್ಲದೆ, ಚಿಂತನೆ ಮತ್ತು ಜಾಗೃತಿ ಅಭಿಯಾನವಾಗಿ ರೂಪಿಸುತ್ತಿದ್ದೇವೆ. ಮನೆ ಮನೆಗೂ ಬಸವ ತತ್ವಗಳನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಬಸವ ಜಯಂತಿ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಮೌಲ್ಯ ಸಾರಿದ ಬಸವಣ್ಣನವರ ಆಶಯ ಇಂದಿನ ಯುವಜನತೆಗೆ ತಲುಪಿಸುವುದು ಅತ್ಯಗತ್ಯ. ಈ ವರ್ಷದ ಕಾರ್ಯಕ್ರಮವನ್ನು ಸಮಾಜದ ಎಲ್ಲಾ ವರ್ಗಗಳನ್ನೂ ಒಳಗೊಂಡಂತೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳನ್ನು ಒಗ್ಗೂಡಿಸಿ ವೈಭವದಿಂದ ಆಚರಿಸುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎ.ಪಿ. ವಿರೂಪಾಕ್ಷ, ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ. ಮಲ್ಲೇಶ್, ನಿಕಟ ಪೂರ್ವ ಅಧ್ಯಕ್ಷ ಕಾನ್ಯ ಶಿವಮೂರ್ತಿ, ಸಂಚಾಲಕರಾದ ಚಿಕ್ಕಹಳ್ಳಿ ದೇವರಾಜು ಹಾಗೂ ಖಜಾಂಚಿ ಜಯಶಂಕರ್ ಭಾಗವಹಿಸಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವಿಧ ಆಯಾಮಗಳಲ್ಲಿ ವಿವರಿಸಿದರು.
ಪ್ರಚಾರ ಸಮಿತಿ ಉಪಾಧ್ಯಕ್ಷ ಸಿ.ಜಿ. ಮುತ್ತಣ್ಣ, ಪುಷ್ಪಲತಾ, ಬಿ.ಕೆ. ನಾಗರಾಜು, ಶರತ್ ಪುಟ್ಟಬುದ್ದಿ, ಜಗದೀಶ್ ಲಿಂಗಣ್ಣ, ಸಾಮಾಜಿಕ ಮಾಧ್ಯಮ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್, ಎಸ್.ಎಂ. ಸುರೇಶ್, ಶ್ರೀಕಂಠಮೂರ್ತಿ, ಮಹೇಶ್ ಭಾಗಳಿ, ಬಿ.ಕೆ. ನಾಗರಾಜು, ಪ್ರಸಾದ್ ಬಾಬು, ಎಸ್.ಬಿ.ಟಿ. ಸುರೇಶ್, ಶಿವ ಪ್ರೇರಣ್, ಬಿ.ಅರ್. ಶಿವಕುಮಾರ್, ಕಲ್ಮಳ್ಳಿ ನಟರಾಜು, ಜೆಎಸ್ಎಸ್ ಮಹೇಶ್, ಗಜೇಂದ್ರ, ಮೂಗೂರು ನಂಜುಂಡಸ್ವಾಮಿ, ಮಹೇಂದ್ರ ಶೈವ, ಬಿ.ಎಂ. ಪರಮೇಶ್, ಬಿ.ಎಂ. ಬಸವರಾಜು, ಡಿ.ಎ. ಪರಶಿವ ಮೂರ್ತಿ, ದನ್ಯಾ ಸತ್ಯೆಂದ್ರಮೂರ್ತಿ, ರೇಣುಕಾ ರಾಜು, ಎಚ್.ಎನ್. ಸರ್ವಮಂಗಳಾ, ಮಾಲಿನಿ ಪಾಲಾಕ್ಷ, ಮಲ್ಲಿಕಾ ಮಹದೇವಸ್ವಾಮಿ, ಶಿವಮಣಿ ಶೈಲಜಾ, ಶಾಂತಮ್ಮ ಮೊದಲಾದವರು ಇದ್ದರು.