ಬಸವಣ್ಣರ ತತ್ತ್ವ ಅಳವಡಿಸಿಕೊಂಡರೆ ಬಡತನ ಇರದು

| Published : May 26 2025, 12:48 AM IST

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ವಿಶ್ವಗುರು ಬಸವಣ್ಣನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟಿರು.

ನಂಜನಗೂಡಿನಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ದುಡಿಮೆಯ ಹಿರಿಮೆಯನ್ನು ಸಾರಿದ್ದರು, ದುಡಿಮೆಗೆ ಬೆಲೆ ನೀಡಿದರೆ ಬಡತನ ನಿರ್ಮೂಲನೆ ಶತಃಸಿದ್ಧ, ಇನ್ನು ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಮಹಾಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ ಅವರು ಇಡೀ ಮಾನವಕುಲಕ್ಕೇ ಮಾದರಿ ಇಂತಹ ಮಹಾ ಪುರಷರ ಜಯಂತಿ ಆಚರಿಸುವ ಮೂಲಕ ನಾವು ಅವರ ಆದರ್ಶ ಅಳವಡಿಸಿಕೊಂಡರೆ ಈ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಸಮುದಾಯ ಒಗ್ಗೂಡಿಸಿ

ಪ್ರಸ್ತುತ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ವೀರಶೈವರು ಬೇರೆ ಲಿಂಗಾಯಿತರು ಬೇರೆ, ಎಂದು ವಿಂಗಡಣೆ ಮಾಡಿ ನಮ್ಮವರನ್ನೇ ಒಪ್ಪಿಕೊಳ್ಳಲು ತಯಾರಿಲ್ಲದಿದ್ದರೆ, ಬೇರೆ ಸಮಾಜವನ್ನು ಒಪ್ಪಿಕೊಳ್ಳಲು ಸಾಧ್ಯವೇ? ಹೀಗಾಗಿ ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತರಲ್ಲಿ ಏಕತೆಯನ್ನು ಮೂಡಿಸಿ ಎಲ್ಲಾ ಒಳ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ ಎಂದರು.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ

ಈ ಭಾಗದಲ್ಲಿ ಮಾನವ- ಆನೆ ಮತ್ತು ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಿದ್ದು, ಆನೆಗಳು ನಾಡಿಗೆ ಬಾರದಂತೆ ತಡೆಯಲು 8 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಿಲು ಹೆಚ್ಚುವರಿಯಾಗಿ 12 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಚೈನ್ ಲಿಂಕ್ ಫೆನ್ಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗವುದು ಎಂದು ಈ ಸಂದರ್ಭ ಭರವಸೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜದ ಕನಸನ್ನು ಕಂಡಿದ್ದರು. ಆದರೆ ದುರಂತವೆಂದರೆ ಈಗಿನ ರಾಜಕಾರಣಿಗಳು ಬಸವಣ್ಣನವರ ಹೆಸರು ಬಳಸಿಕೊಂಡು ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ನೋವಿನ ಸಂಗತಿ ಬಸವಣ್ಣನವರ ಫೋಟೋಗಳನ್ನು ಕಚೇರಿಗಳಲ್ಲಿ ಇರಿಸಿದರಷ್ಟೇ ಸಾಲದು ಬದಲಾಗಿ ಸಮಾಜದ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರಂತಹ ಜನನಾಯಕರು ಪ್ರಸ್ತುತ ರಾಜಕಾರಣಕ್ಕೆ ಅಗತ್ಯವಾಗಿದೆ. ಹೀಗಾಗಿ ರಾಜ್ಯಕ್ಕೆ ಅವಶ್ಯಕತೆ ಇರುವುದು ಜನನಾಯಕರೇ ಹೊರತು ರಾಜಕಾರಣಿಗಳಲ್ಲ. ಹೀಗಾಗಿ ವೀರಶೈವ ಲಿಂಗಾಯತ ಸಮುದಾಯದ ಜನರು ಒಳಪಂಗಡದ ಬೇಧ ಭಾವಗಳನ್ನು ಮರೆತು ಸಮಾಜದ ಎಲ್ಲಾ ವರ್ಗದ ಜನರೊಡನೆ ಒಟ್ಟಾಗಿ ಸಾಗಬೇಕಿದೆ ಎಂದು ತಿಳಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಹೆಡಿಯಾಲ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಉಪಟಳ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಜೊತೆಗೆ ನಂಜನಗೂಡು ಮುಖ್ಯ ರಸ್ತೆಯಲ್ಲಿ ಅರಣ್ಯ ಭವನದ ಮುಂಭಾಗ ಬಸ್ ನಿಲ್ದಾಣ ನಿರ್ಮಿಸಲು ಸ್ಥಳಾವಕಾಶ ಒದಗಿಸುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಇನ್ನು ನಂಜನಗೂಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನಕ್ಕೆ ಮುಂದುವರಿದ ಕಾಮಗಾರಿಯಾಗಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ಪಡೆದುಕೊಂಡು ಭವನದ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಾವಡಗೆರೆ ಗುರು ಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತ ಮಠದ ಶ್ರೀ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ಟಿ.ಎಸ್‌. ಶ್ರೀವತ್ಸ, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಕಾರ್ಯದರ್ಶಿ ಶಿವಪ್ಪದೇವರು, ಹಗಿನವಾಳು ಚೆನ್ನಪ್ಪ, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಗುರುಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ವೀರಶೈವ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ. ಬಸವಣ್ಣ, ಮುಖಂಡರಾದ ಮಹದೇವಪ್ಪ, ಶ್ಯಾಂಪಟೇಲ್, ಅಶೋಕ್, ಕಣೆನೂರು ಪರಶಿವಮೂರ್ತಿ, ನಾಗೇಶ್ ರಾಜ್, ಬದನವಾಳು ಮಹೇಶ್, ಹಾಡ್ಯ ಶಂಕರ್, ಯುವ ಘಟಕ ಅಧ್ಯಕ್ಷ ಮಲ್ಕುಂಡಿ ಮಹಾದೇವಸ್ವಾಮಿ ಮೊದಲಾದವರು ಇದ್ದರು.

ಆಕರ್ಷಕ ಮೆರವಣಿಗೆ

ಇದಕ್ಕೂ ಮುನ್ನ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ಆಕರ್ಷಕ ಕಲಾ ತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು.