ಸಾರಾಂಶ
ಸಂಡೂರು: ತಾಲೂಕು ವೀರಶೈವ ಲಿಂಗಾಯತ ಸಂಘದ ವತಿಯಿಂದ ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಮೇ ೩೧ರಂದು ಬೆಳಗ್ಗೆ ೧೦ ಗಂಟೆಗೆ ಬಸವ ಜಯಂತಿ ಹಾಗೂ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.
ಪಟ್ಟಣದಲ್ಲಿನ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ಮೇ ೩೧ರಂದು ಬೆಳಗ್ಗೆ ೮ ಗಂಟೆಗೆ ಪಟ್ಟಣದ ತಾಲೂಕು ಕಚೇರಿ ಬಳಿ ಇರುವ ಶ್ರೀಗಣೇಶ ದೇವಸ್ಥಾನದಿಂದ ವಾದ್ಯ ಮೇಳ ಹಾಗೂ ಕಲಾ ತಂಡಗಳೊಂದಿಗೆ ಶ್ರೀಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಹಾಗೂ ವಚನ ಗ್ರಂಥಗಳ ಮೆರವಣಿಗೆ ನಡೆಯಲಿದೆ. ತಹಸೀಲ್ದಾರ್ ಜಿ. ಅನಿಲ್ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಆದರ್ಶ ಕಲ್ಯಾಣ ಮಂಟಪದಲ್ಲಿ ಶ್ರೀಬಸವೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗುವುದು.ಸಾನ್ನಿಧ್ಯವನ್ನು ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಹಾಗೂ ಹರಪನಹಳ್ಳಿ ತಾಲೂಕಿನ ಕಮ್ಮತ್ತಹಳ್ಳಿ-ಪಾಂಡುಮಟ್ಟಿಯ ವಿರಕ್ತಮಠದ ಡಾ. ಶ್ರೀಗುರುಬಸವ ಸ್ವಾಮೀಜಿ ವಹಿಸಲಿದ್ದಾರೆ. ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೆಸ್ಕೊ ಕಂಪನಿಯ ಮಾಲೀಕ ಕೆ.ಎಸ್. ನಾಗರಾಜ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಈ. ತುಕಾರಾಂ, ಬಿಕೆಜಿ ಕಂಪನಿಯ ಮಾಲೀಕ ಬಿ. ನಾಗನಗೌಡ ಹಾಗೂ ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಪಿ. ರವಿಕುಮಾರ್ ಆಗಮಿಸಲಿದ್ದಾರೆ.
ಸಂಜೆ ೬ ಗಂಟೆಗೆ ನಡೆಯುವ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಯಶವಂತನಗರದ ಶ್ರೀಗುರು ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ಧರಾಮೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಗಡಂಬ್ಲಿ ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ಸಭೆಯಲ್ಲಿ ಸಂಘದ ಮುಖಂಡರಾದ ಎಸ್.ವಿ. ಹಿರೇಮಠ, ಮೇಲುಸೀಮೆ ಶಂಕ್ರಪ್ಪ, ಗಡಂಬ್ಲಿ ಚನ್ನಬಸಪ್ಪ, ಭುವನೇಶ್ ಮೇಟಿ, ಟಿ.ಜಿ. ಸುರೇಶ್ಗೌಢ, ಜಿ. ವೀರೇಶ್, ಎಂ. ಚರಂತಯ್ಯ, ವಿಜಯಕುಮಾರ್ ಮುಂತಾದವರಿದ್ದರು.