ಕನ್ನಡಪ್ರಭ ವಾರ್ತೆ ತುಮಕೂರುಬಸವಣ್ಣ ಎಂದರೆ ವ್ಯಕ್ತಿಯಲ್ಲ, ಅದೊಂದು ಶಕ್ತಿ, ಅದೊಂದು ತತ್ವ. ಬಸವ ತತ್ವದಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಇಂದು ಪ್ರಾಚ್ಯದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಇಂತಹ ಆಚರಣೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದೇವೆಂದರೆ ಅದಕ್ಕೆ ಅನೇಕ ಮಹನೀಯರು ಕೊಟ್ಟ ಚಿಂತನೆಗಳೇ ಕಾರಣ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಅಂಗಸಂಸ್ಥೆಗಳು ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು, ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವದ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿವೆ. ನಮ್ಮಲ್ಲಿ ಬಸವಪ್ರಜ್ಞೆ ಮೂಡದಿದ್ದರೆ ಅವರ ಜಯಂತಿಗಳು ಕೇವಲ ಸಮಾರಂಭವಾಗುತ್ತವೆ ಅಷ್ಟೇ ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಮ್ಮ ಸಮಾಜದ ಪರಂಪರೆಯನ್ನು ಮುಂದುವರೆಸಲು ಯುವಪೀಳಿಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಮಾಜದ ಅಸ್ತಿತ್ವ ಉಳಿಸಲು ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಬೇಕು. ಇಂದು ವೀರಶೈವ ಸಮಾಜ ವಿಶ್ವದಾದ್ಯಂತ ಇದೆ. ಹೊರದೇಶಗಳಲ್ಲೂ ಬಸವ ಜಯಂತಿ ಕಾರ್ಯಕ್ರಮ ನಡೆಯುತ್ತಿವೆ. ವೀರಶೈವ ಸಮಾಜವು ವಿಶ್ವಮಟ್ಟದಲ್ಲಿ ಪ್ರಚಾರ ಪಡೆದಿದೆಯೆಂದರೆ ಅದಕ್ಕೆ ನಮ್ಮ ಮಠಮಾನ್ಯಗಳ ಮಠಾಧೀಶರುಗಳೇ ಪ್ರಮುಖ ಕಾರಣ. ಸಮಾಜ ಬಂಧುಗಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಬೇಕು. ಹಾಗೇ ನಮ್ಮ ಸಮಾಜದ ಅಸ್ತಿತ್ವದ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವವನ್ನು ನನ್ನ ಕುಟುಂಬದಂತೆ ಭಾವಿಸುವುದು ಧರ್ಮದ ಸಂದೇಶ. ಸಮಾಜಕ್ಕೆ ಒಳಿತು ಮಾಡುವುದು, ಹೃದಯಗಳನ್ನು ಬೆಸೆಯುವುದು, ಭಾವನೆಗಳಿಗೆ ಧಕ್ಕೆಯಾಗದಂತೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಧರ್ಮದ ಉದ್ದೇಶ, ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯಕರು, ಬಸವಣ್ಣ, ಸಿದ್ಧರಾಮೇಶ್ವರರು ಸೇರಿದಂತೆ ಅನೇಕ ಮಹನೀಯರು ಮಾನವ ಧರ್ಮದ ಶ್ರೇಷ್ಠತೆಯ ಸಾರವನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.ಬಸವಣ್ಣನ ಭಕ್ತಿ, ಅಕ್ಕಮಹಾದೇವಿಯ ವೈರಾಗ್ಯ, ಅಲ್ಲಮಪ್ರಭುವಿನ ಜ್ಞಾನವನ್ನು ಒಂದು ಚೇತನದಲ್ಲಿ ಕಂಡಿದ್ದೇನೆ, ಆ ಚೇತನವೇ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳು. ಸುಮಾರು 60 ವರ್ಷಗಳ ಕಾಲ ಪೂಜ್ಯರ ಪಾದಸ್ಪರ್ಶ, ಆಶೀರ್ವಾದ ಪಡೆದ ನನಗೆ ಅವರು ಬದುಕಿನ ದಾರಿದೀಪವಾಗಿದ್ದರು, ಅವರಿಂದಾಗಿ ನನ್ನ ಬದುಕು ಸಾರ್ಥಕ ಬದುಕು ಆಗಲು ಸಾಧ್ಯವಾಯಿತು ಎಂದು ತಿಳಿಸಿದರು.ಸಪ್ತಗಿರಿ ಕಾಲೇಜಿನ ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ ವಿಶೇಷ ಉಪನ್ಯಾಸ ನೀಡಿದರು. ಇದರ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಹಿರಿಯರಾದ ಟಿ.ಕೆ. ನಂಜುಂಡಪ್ಪ, ಕೆ.ವೈ. ಸಿದ್ಧಲಿಂಗಮೂರ್ತಿ, ಸಿದ್ಧಗಂಗಮ್ಮ ಸಿದ್ಧರಾಮಣ್ಣ, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಟಿ.ಬಿ. ಹರೀಶ್, ಗೌರವ ಕಾರ್ಯದರ್ಶಿ ಡಿ.ಜೆ. ಶಶಿಧರನ್, ಸಹ ಕಾರ್ಯದರ್ಶಿ ಟಿ.ಜೆ. ಸಿದ್ಧಲಿಂಗಸ್ವಾಮಿ, ಖಜಾಂಚಿ ಜಿ.ಕೆ. ಸ್ವಾಮಿ, ನಿರ್ದೇಶಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ಪರಮೇಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ. ರುದ್ರಪ್ಪ, ಸ್ನೇಹಸಂಗಮ ಬ್ಯಾಂಕ್ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಕೆ. ಮಲ್ಲಿಕಾರ್ಜುನ್ ಸೇರಿದಂತೆ ವೀರಶೈವ ಸಮಾಜದ ಅಂಗಸಂಸ್ಥೆರಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.