ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಸೂಕ್ತ ವಾಗಿರುವುದರಿಂದ ಈ ಮಲಕ ಸರ್ಕಾರಕ್ಕೆ ಅಭಿನಂಧನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿವಿಧ ಸ್ವಾಮೀಜಿಗಳು ಹೇಳಿದರು.ನಗರದ ಸಿದ್ದೇಶ್ವರ ಪ್ಯಾಲೇಸ್ನಲ್ಲಿ ನಡೆದ ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು ಬಸವಣ್ಣ ಮಠಾಧೀಶರ ವಿಶೇಷ ಚಿಂತನ ಮಂಥನ ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಅಸಮಾನತೆ ವಿರುದ್ಧ ಹೋರಾಡಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಶೂದ್ರರಿಗೆ ದೇವಸ್ಥಾನ ಒಳಗೆ ಪ್ರವೇಶವಿರಲಿಲ್ಲ, ಊರೊಳಗೆ ಬಂದರೆ ಮುಖಕ್ಕೆ ಮಡಿಕೆಯನ್ನು ಹಾಕಿಕೊಂಡು, ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡು ಬರಬೇಕಿತ್ತು. ಮಂತ್ರ ಪಠಿಸಿದರೆ ನಾಲಿಗೆ ಸೀಳುವಂತಹ ಕಾಲಘಟ್ಟದಲ್ಲಿ ಕಾರ್ತಿಕದ ಕತ್ತಲಲ್ಲಿ ಚಂದ್ರ ಉದಯವಾದಂತೆ ಈ ಎಲ್ಲಾ ಅಸಮಾನತೆಗಳನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರೆಂದರು.ಮೌಡ್ಯತೆ, ಜಾತಿಯತೆ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದಿದ್ದು ಮಹಾರಾಷ್ಟ್ರದಲ್ಲಿ. ದಾವಣಗೆರೆಯ ಹರ್ಡೇಕರ್ ಮಂಜಪ್ಪ ಹಾಗೂ ಮೃತ್ಯುಂಜಯ ಎಂಬುವರು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ದಾವಣಗೆರೆ ನಗರದಲ್ಲಿ ಬಸವ ಜಯಂತಿ ಆಚರಿಸಿದ್ದರು ಎಂದು ನೆನೆದರು.
ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಶ್ರೀ ಮಾತನಾಡಿ, ಭಾರತ ದೇಶವು ಮೂಲತಃ ಜಾತಿ ವ್ಯವಸ್ಥೆಯ ಸಮಾಜಗಳಿಂದ ಕೂಡಿದ್ದು, ಈ ಶ್ರೇಣಿಕೃತ ಸಮಾಜದಲ್ಲಿ ಅನೇಕ ತಾರತಮ್ಯಗಳ ವಿರುದ್ಧ ಜಾತಿ ಮುಖ್ಯವಲ್ಲ ನೀತಿ ಮುಖ್ಯ ಎಂದು ಅನೇಕ ದಾರ್ಶನಿಕರು ಹೇಳಿದ್ದಾರೆ. ಆದರೆ ಇಂದಿಗೂ ಕೂಡ ಸಮಾಜದಲ್ಲಿ ಅನೇಕ ತಾರತಮ್ಯ, ಜಾತಿ ವ್ಯವಸ್ಥೆ ಉಳಿದಿದೆ ಎಂದರು.ಪೈಗಂಬರನ್ನು ಇಸ್ಲಾಂ ಸಮುದಾಯದ ದೇವರೆಂದು, ಏಸು ಕ್ರಿಸ್ತರನ್ನು ಕ್ರೈಸ್ತ ಧರ್ಮದ ದೇವರೆಂದು ಆರಾಧಿಸಲಾಗುತ್ತಿದೆ. ಆದರೆ ಹಿಂದೂ ಧರ್ಮದಲ್ಲಿ ಜಾತಿಗೊಂದು ದೇವರನ್ನು ಗುರುತಿಸುವ ಈ ಸಮಾಜದಲ್ಲಿ ಬಸವಣ್ಣನವರು ದೇವನೊಬ್ಬ ನಾಮ ಹಲವು ಎಂದು ಬಣ್ಣಿಸಿ, ವಿವಿಧತೆಯಲ್ಲಿ ಏಕತೆ ಸಾರಿದರೆಂದರು.
ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಹಲವಾರು ನ್ಯೂನತೆಗಳನ್ನು ತೊಡೆದು ಹಾಕಲು ಮೌಢ್ಯತೆಗಳನ್ನ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರನ್ನು ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹರ್ಷ ಮೂಡಿಸಿದೆ ಎಂದರು.ಯಲವಟ್ಟಿ ಶ್ರೀ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಶ್ರೀಗಳು ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಶಕ್ತಿ ಇದೆ. ಕನ್ನಡ ಮಾತನಾಡಿದರೆ ಕಿಳರಿಮೆ ಎಂಬ ಭಾವನೆ ಬಂದಿದೆ. ಬಹುತೇಕ ಜನರು ತಮ್ಮ ಸಹಿಯನ್ನು ಇಂಗ್ಲೀಷ್ನಲ್ಲಿ ಮಾಡುತ್ತಾರೆ. ಕನ್ನಡದ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದರೆ ಇಂಗ್ಲಿಷ್ ಶಾಲೆಗಳು ಹೆಚ್ಚು ಹೆಚ್ಚು ತೆಲೆ ಎತ್ತುತ್ತಿದೆ ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಚಿಂತನೆ ಮಾಡಬೇಕು ಸಲಹೆ ನೀಡಿದರು.
ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಗೌರವಿಸಿರುವುದು ಆ ದಿನಗಳಲ್ಲಿ ಬಸವಣ್ಣನವರ ಶ್ರಮವೇ ಕಾರಣ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾಯಕ ಇಂದಿಗೂ ಕೂಡ ಪ್ರಸ್ತುತ ಎಂದರು ಎಂದರು.ಸಮ್ಮೇಳನ ಸರ್ವಾಧ್ಯಕ್ಷ ಸಿ.ವಿ.ಪಾಟೀಲ್, ಜಿಲ್ಲಾ ಕಾಸಪ್ಪ ಅಧ್ಯಕ್ಷ ಬಿ.ವಾಮದೇವಪ್ಪ ಉಪಸ್ಥಿತರಿದ್ದರು. ಸ್ವಾಗತ ಎಂ.ಎ. ಚೆನ್ನಬಸಪ್ಪ, ನಿರೂಪಣೆ ಎಲ್.ಜಿ. ಮಧು ಕುಮಾರ್, ವಂದನಾರ್ಪಣೆ ಬಸನಗೌಡ ಎಂ.ಎಸ್. ನೆರವೇರಿಸಿದರು.