ಹನೂರು: ಬಸವಣ್ಣನವರು ಅನುಭವ ಮಂಟಪದ ಆಡಳಿತಾತ್ಮಕ ಸಂವಿಧಾನಕ್ಕೆ ಅಂದೇ ಆಯಾಮವನ್ನು ನೀಡಿ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಜನಧ್ವನಿ ವೆಂಕಟೇಶ್ ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನರಿಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ದೇಶದಲ್ಲಿ ಸಂವಿಧಾನ ಆಡಳಿತ ವ್ಯವಸ್ಥೆ ಜಾರಿಗೆ ಬರುವ ಮೊದಲು ನಮ್ಮ ನಾಡಿನಲ್ಲಿ 800 ವರ್ಷಗಳ ಹಿಂದೆಯೇ ಎಲ್ಲಾ ವರ್ಗದ ಜನ ಸಮುದಾಯಗಳಿಗೆ ಸಮಾನತೆಯಲ್ಲಿ ಪ್ರಾತಿನಿಧ್ಯ ನೀಡಿದ್ದು ಬಸವಣ್ಣನವರ ಹೆಗ್ಗಳಿಕೆಯಾಗಿದೆ ಎಂದರು.

ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲಾ ಜನರನ್ನೂ ಅಪ್ಪಿಕೊಂಡು ಲಿಂಗ ಧೀಕ್ಷೆ ನೀಡಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಆದರೆ ಇಂದಿಗೂ ಜಾತಿ ವ್ಯವಸ್ಥೆ ತೊಲಗಿಲ್ಲ, ಅವರವರ ಜಾತಿ ಜನಾಂಗದ ಕಾರ್ಯಕ್ರಮದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿಂತಿಸಬೇಕಿದೆ ಎಂದರು.

ಅಂದು ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಒತ್ತು ನೀಡಿದ್ದರು. ಪ್ರಸ್ತುತ 20- 21ನೇ ಶತಮಾನದಲ್ಲಿ ಶ್ರೀಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಮತ್ತು ದಾಸೋಹಕ್ಕೆ ಹೆಚ್ಚಿನ ಗಮನ ನೀಡಿ, ಬಸವಣ್ಣ ಅವರ ಹಾಗೆಯೇ ನುಡಿದಂತೆ ನಡೆದಿರುವುದು ಇತಿಹಾಸ ಎಂದು ಬಣ್ಣಿಸಿದರು.


ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವ ಬದಲು ವಚನ ಹೇಳಿಕೊಡಬೇಕು. ಎಲ್ಲರಲ್ಲಿಯೂ ನಡೆ, ನುಡಿ ಚೆನ್ನಾಗಿರಬೇಕು. ಬಸವಣ್ಣ ಅವರ ಮಾರ್ಗದರ್ಶನ ಮತ್ತು ಜೀವನ ಸಂದೇಶ ತಿಳಿದು ನಡೆಯಬೇಕು ಎಂದರು.

ವಚನ ಸಾಹಿತ್ಯವನ್ನು ರಚಿಸಿ, ಸಂದೇಶಗಳನ್ನು ನೀಡಿದ ಬಸವಾದಿ ಶರಣರ ಸಾಮಾಜಿಕ ಜಾಗೃತಿ ಕಾರ್ಯಗಳು ಅಸಮಾನತೆಯ ಸಮಾಜ ಹಾಗೂ ಜಾಗತಿಕ ದೇಶಗಳ ಸಂಘರ್ಷದ ಕಾಲ ಘಟ್ಟದಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಹಾಗಾಗಿ ಸಮಾನತೆ, ಶಾಂತಿ, ಸೌಹಾ ರ್ದತೆಯನ್ನು ಜಗತ್ತಿಗೆ ಪಸರಿಸಲು ಜಗಜ್ಯೋತಿ ಶ್ರೀ ಬಸವೇಶ್ವರರನ್ನು ಜಗತ್ತಿನಾದ್ಯಂತ ಕೊಂಡೊಯ್ಯಬೇಕಿದೆ ಎಂದರು.

ಹನೂರು ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ, ಉಗನಿಯ ಮಹೇಶ್, ಲೋಕೇಶ್ ಜೆಟ್ಟಿ, ವಿಜಯೇಂದ್ರ ಕೂಡ್ಲೂರು, ಮಾದೇಶ್, ಲಿಂಗಾಚಾರಿ, ಚಿನ್ನರಾಜು, ಊರಿನ ಮುಖಂಡರು, ಯಜಮಾನರು ಉಪಸ್ಥಿತರಿದ್ದರು.