ವಚನಗಳಿಂದ ಕಾಯಕ ಮಹತ್ವ ಸಾರಿದ ಬಸವಣ್ಣ

| Published : May 01 2025, 12:50 AM IST

ಸಾರಾಂಶ

ಚಾಮರಾಜನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾವರಣದಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಸಂಸದ ಸುನೀಲ್ ಬೋಸ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ ಕಾಯಕದ ಮಹತ್ವವನ್ನು ತಿಳಿಸಿದ ಬಸವಣ್ಣನವರು ಜನರನ್ನು ಅರಿವಿನೆಡೆಗೆ ಕೊಂಡೊಯ್ದ ವಿಶ್ವಗುರುವಾಗಿದ್ದಾರೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು. ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೂಢನಂಬಿಕೆ, ಜಾತೀಯ ಅಸಮಾನತೆ, ಧರ್ಮಾಚರಣೆ ಬಹಳ ಕಠಿಣವಾಗಿದ್ದ ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲಾ ಶಿವಶರಣರಾದಿಯಾಗಿ ಕಾಯಕ ತತ್ವದ ಮೂಲಕ ಜನರನ್ನು ಬಡಿದೆಚ್ಚರಿಸಿದರು. ೧೫೦೦ ಸಾವಿರ ವಚನಗಳನ್ನು ಸರಳ ಭಾಷೆಯಲ್ಲಿ ರಚಿಸಿದ ಬಸವಣ್ಣ ದಯೆ ಇಲ್ಲದ ಧರ್ಮ ಯಾವುದಯ್ಯ, ಇವನಾರವ, ಇವನಾರವ ಎನ್ನದಿರಿ ಎಲ್ಲರನ್ನು ನಮ್ಮವರೆನ್ನಿ ಎಂದು ಪ್ರತಿಪಾದಿಸಿದರು ಎಂದರು.

ಬಸವಣ್ಣನವರು ಸಾಮಾಜಿಕ ಅಸಮಾನತೆಯನ್ನು ಬೇರುಸಮೇತ ಕೀಳಲು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿದರು. ಬಸವಣ್ಣನವರು ಹೇಳಿದಂತೆ ದೇವರು ಎಲ್ಲರಲ್ಲಿಯೂ ಇದ್ದಾನೆ. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಸಂದೇಶ, ಆದರ್ಶ ಮೌಲ್ಯಗಳನ್ನು ಪಾಲಿಸಬೇಕು. ಅವರ ಹಾದಿಯಲ್ಲಿ ನಡೆಯಬೇಕು. ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣರನ್ನು ಒಳಗೊಂಡಂತೆ ಎಲ್ಲ ಶಿವಶರಣರು ವಚನಾಮೃತಗಳನ್ನು ಜನರಿಗೆ ಉಣಬಡಿಸಿದ್ದಾರೆ. ಎನಗಿಂತ ದೊಡ್ಡವರೆಂದು ಭಾವಿಸಿದ್ದ ಬಸವಣ್ಣನವರಿಗೆ ಯಾವುತ್ತೂ ಅಹಂ ಎಂಬುದು ಇರಲಿಲ್ಲ. ಸಮಾಜ ಸುಧಾರಣೆಗಾಗಿ ಜಾತೀಯತೆಯನ್ನು ಹೋಗಲಾಡಿಸಿ ಬಸವಣ್ಣನವರ ಆದರ್ಶ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅನುಸರಿಸೋಣ ಎಂದರು.

ಮುಖ್ಯಭಾಷಣ ಮಾಡಿದ ಮೈಸೂರಿನ ವಿಶ್ರಾಂತ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಕಾರಕ ಬದಲಾವಣೆಯ ಹೆಜ್ಜೆಗಳು ಇಂದು ಸಹ ಪ್ರಸ್ತುತ. ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಶಿವಶರಣರ ವಚನಗಳನ್ನು ಸಂಗ್ರಹಿಸಿ ಅವುಗಳ ಮಹತ್ವವನ್ನು ಜನರಿಗೆ ತಿಳಿಸಲು ೧೫ ಸಂಪುಟಗಳನ್ನಾಗಿ ಹೊರತಂದಿದೆ. ಈ ಪೈಕಿ ಬಸವಣ್ಣನವರು ರಚಿಸಿದ ೧೫೦೦ ವಚನಗಳು ಇವೆ. ಈ ವಚನಗಳನ್ನು ಎಲ್ಲರೂ ಅಧ್ಯಯನ ಮಾಡುವ ಮೂಲಕ ವಚನಗಳ ತಿರುಳನ್ನು ಅರಿಯಬೇಕು ಎಂದರು.

ಇಂದು ಬಸವಣ್ಣನವರ ೮೯೨ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಬಸವಣ್ಣನವರ ಸಾಮಾಜಿಕ ಬದಲಾವಣೆಯ ಸಂದೇಶಗಳು ಈ ಜಗತ್ತು ಇರುವವರೆಗೂ ಪ್ರಸ್ತುತವಾಗಿರಲಿವೆ. ಸಾಮಾಜಿಕ, ಸಾಹಿತ್ಯ, ಧಾರ್ಮಿಕ, ರಾಜಕೀಯ ಬದಲಾವಣೆಗೆ ಬಸವಣ್ಣ ಕಾರಣರಾದರು. ಕಾಯಕ, ದಾಸೋಹ, ಅಸಮಾನತೆ, ಸ್ತ್ರೀ ಸಮಾನತೆ ಸೇರಿದಂತೆ ಹಕಲವು ಕ್ಷೇತ್ರಗಳ ಪರಿವರ್ತನೆಗೆ ನಾಂದಿ ಹಾಡಿದ ಬಸವಣ್ಣರನ್ನು ಸಮಗ್ರ ಯುಗಪುರುಷರೆಂದರೇ ತಪ್ಪಾಗಲಾರದು. ಜಾಗತಿಕ ಸಂಸ್ಕೃತಿಗೆ ಘನತೆ ತಂದುಕೊಟ್ಟ ಬಸವಣ್ಣನ ಸ್ಮರಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ ವಾಚನ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ), ನಗರಸಭೆ ಸದಸ್ಯರಾದ ಎಂ. ಕಲಾವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ನಗರದ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನ ಪ್ರಸ್ತುತ ಪಡಿಸಲಾಯಿತು.