ಜಾತಿ ನಿರ್ಮೂಲನೆಗೆ ಬಸವಣ್ಣನ ಆದರ್ಶ ಪಾಲಿಸಿ: ವಿ.ಸೋಮಣ್ಣ

| Published : May 11 2024, 01:36 AM IST

ಸಾರಾಂಶ

ಸಮಾನತೆ, ಜಾತಿ ವ್ಯವಸ್ಥೆ ನಿರ್ಮೂಲನೆ, ಸಮ ಸಮಾಜ ನಿರ್ಮಾಣಕ್ಕೆ ಕ್ರಾಂತಿಯೋಗಿ ಬಸವೇಶ್ವರರ ಆದರ್ಶ ಪಾಲಿಸಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮಾನತೆ, ಜಾತಿ ವ್ಯವಸ್ಥೆ ನಿರ್ಮೂಲನೆ, ಸಮ ಸಮಾಜ ನಿರ್ಮಾಣಕ್ಕೆ ಕ್ರಾಂತಿಯೋಗಿ ಬಸವೇಶ್ವರರ ಆದರ್ಶ ಪಾಲಿಸಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶುಕ್ರವಾರ ಬಸವ ಜಯಂತಿ ಪ್ರಯುಕ್ತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್‌ನ ಬಸವ ವನ ಉದ್ಯಾನವನದಲ್ಲಿ ಬಸವವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ಧಾಂತದ ಮಹತ್ವವನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತ ಜಗಜ್ಯೋತಿ ಬಸವೇಶ್ವರರಾಗಿದ್ದಾರೆ. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಮೊದಲನೇಯ ಸಂಸತ್‌ ಸ್ಥಾಪಕರಾಗಿದ್ದಾರೆ ಎಂದು ಬಣ್ಣಿಸಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ತೊಲಗಿಸಲು ಕಾಯಕಯೋಗಿ ಬಸವೇಶ್ವರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು. ಆಗ ಮಾತ್ರ ಸಮಾನತೆ, ಜಾತಿ ನಿರ್ಮೂಲನೆ ಹಾಗೂ ಸಮ ಸಮಾಜ ನಿರ್ಮಾಣ ಮಾಡಬಹುದು. ಪ್ರತಿಯೊಬ್ಬರು ಶ್ರದ್ದೆ, ಭಕ್ತಿಯಿಂದ ತಮ್ಮ ಕಾಯಕ ಮಾಡಬೇಕು. ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕೆ ಉಪಯೋಗ ಮಾಡಬೇಕು ಎಂದರು.

ಇಂದಿನ ಕಲುಷಿತ ಸಮಾಜವನ್ನು ಸರಿಪಡಿಸಲು ಪ್ರತಿಯೊಬ್ಬರು ಬಸವೇಶ್ವರರ ಸಿದ್ಧಾಂತವನ್ನು ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಗೆಲುವು ಸಾಧಿಸಲಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯ ದಾಸೇಗೌಡ, ಬಿಜೆಪಿ ಮುಖಂಡರಾದ ಶ್ರೀಧರ್, ಎಚ್.ರಮೇಶ್, ವೇಣುಗೋಪಾಲ್ ಉಪಸ್ಥಿತರಿದ್ದರು.