12ನೇ ಶತಮಾನದ ಬಸವತತ್ವ ಇಂದಿನ ಸಮಾಜಕ್ಕೆ ಅವಶ್ಯಕತೆ ಇದೆ. ಬಸವ ತತ್ವವನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವಲ್ಲಿ ಮಠಗಳು ಮಾಡುತ್ತಿರುವ ಕೆಲಸ ಅಪಾರವಾಗಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
- ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಬಸವತತ್ವ ಸಮ್ಮೇಳನ- ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
12ನೇ ಶತಮಾನದ ಬಸವತತ್ವ ಇಂದಿನ ಸಮಾಜಕ್ಕೆ ಅವಶ್ಯಕತೆ ಇದೆ. ಬಸವ ತತ್ವವನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವಲ್ಲಿ ಮಠಗಳು ಮಾಡುತ್ತಿರುವ ಕೆಲಸ ಅಪಾರವಾಗಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಬಸವತತ್ವ ಸಮ್ಮೇಳನ ಹಾಗೂ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಚನ ಸಾಹಿತ್ಯದಿಂದ ಬಸವಣ್ಣನವರ ಇತಿಹಾಸ, ಸಮಸಮಾಜ ನಿರ್ಮಾಣಕ್ಕಾಗಿ ಬಸವಣ್ಣ ಮಾಡಿದ ಹೋರಾಟಗಳು ತಿಳಿಯುತ್ತಿವೆ. 12ನೇ ಶತಮಾನದಲ್ಲಿ ಬಸವ ತತ್ವದ ಸಾಹಿತ್ಯವನ್ನು ನಾಶ ಮಾಡಲು ಅನೇಕರು ಪ್ರಯತ್ನಪಟ್ಟಿದ್ದರು. ಶರಣರ ಹೋರಾಟದಿಂದ ವಚನ ಸಾಹಿತ್ಯ ಉಳಿದಿದೆ. ಆ ಸಂದರ್ಭದಲ್ಲಿ ಹೋರಾಟ ಮಾಡಿದ ಶರಣರನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಬಸವ ತತ್ವವನ್ನು ನಾಶ ಮಾಡಲು ಏಕೆ ಹೊರಟರು ಎಂದು ಚರ್ಚೆ ಮಾಡುವುದು ಅವಶ್ಯಕತೆ ಇದೆ. ಬುದ್ದನ ತತ್ವಗಳು, ಬಸವಣ್ಣನವರ ಸಮ ಸಮಾಜದ ಪರಿಕಲ್ಪನೆಗಳನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಕಾನೂನುಗಳನ್ನಾಗಿ ರೂಪಿಸಿದರು. ಇದರಿಂದಾಗಿ ನಾವೆಲ್ಲರೂ ಇಂದು ಉತ್ತಮ ರೀತಿಯಲ್ಲಿ ಜೀವಿಸಲು ಸಾಧ್ಯವಾಗಿದೆ ಎಂದ ಅವರು, ಬುದ್ದ, ಬಸವ, ಅಂಬೇಡ್ಕರ್ ತತ್ವ- ಆದರ್ಶಗಳು ಈ ಭೂಮಿ ಇರುವಷ್ಟು ದಿನವೂ ಶಾಶ್ವತವಾಗಿರಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಮಾತನಾಡಿ, ರಾಜಕಾರಣದಲ್ಲಿ ಇರುವವರಿಗೆ ಸೇವಾ ಮನೋಭಾವನೆ ಇರಬೇಕಾಗಿದೆ. ಸೇವನೆ ಮಾಡುವ ಉದ್ದೇಶಕ್ಕಾಗಿ ರಾಜಕಾರಣ ಮಾಡಬಾರದು. ವೈಜ್ಞಾನಿಕತೆ, ವೈಚಾರಿಕತೆ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ರಾಜಕಾರಣ ಮಾಡಿದವರು ಸದಾ ಸ್ಮರಣೆಯಲ್ಲಿ ಇರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಗುರು ಬಸವ ಶ್ರೀ ಪ್ರಶಸ್ತಿಯನ್ನು ಶಿಕ್ಷಣ ತಜ್ಞ ನಾಡೋಜ ಡಾ.ವುಡೇ ಪಿ. ಕೃಷ್ಣ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಮಠಗಳ ಮಠಾಧೀಶರಾದ ಶ್ರೀ ಗುರುಬಸವ ಪಟ್ಟಾದಾರ್ಯ ಸ್ವಾಮಿಗಳು, ರಾಜಯೋಗಿ ಗುರುಬಸವ ಮಹಾಸ್ವಾಮಿಗಳು, ಜಗದ್ಗುರು ಸೋಮಶಂಕರ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಗುರುಮಹಾಂತ ಮಹಾಸ್ವಾಮಿಗಳು, ಮಹಾಂತ ಮಹಾಸ್ವಾಮಿಗಳು, ಚಂದ್ರಶೇಖರ ಮಹಾಸ್ವಾಮಿಗಳು ಸಭೆಯಲ್ಲಿ ಹಾಜರಿದ್ದು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಜೀವವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್, ಸಿ.ನಾಗರಾಜ್, ವೀರೇಶ್ ನಾಯ್ಕ್, ರವಿ ಬೋಸರಾಜು ಹಾಜರಿದ್ದರು.
(ಫೋಟೋ: 18ಕೆಸಿಎನ್ಜಿ1)ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಬಸವತತ್ವ ಸಮ್ಮೇಳನ ಹಾಗೂ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಸಮಾರಂಭವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಇದ್ದರು.
- - -(ಬಾಕ್ಸ್-1) * ಬಸವ ತತ್ವಗಳು ವಿಶ್ವಕ್ಕೇ ಮಾದರಿ: ಯು.ಟಿ.ಖಾದರ್ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ- ಆದರ್ಶಗಳನ್ನು ಇಂದಿನ ಯುವಜನತೆಗೆ ತಿಳಿಸಬೇಕು. ಸಮಾಜದಲ್ಲಿ ಸೌಹಾರ್ದದಿಂದ ಬದುಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ನಾವು ಆಚರಿಸುವ ಜೊತೆಗೆ ಮುಂದಿನ ಪೀಳಿಗೆಗೆ ಇವುಗಳನ್ನು ವರ್ಗಾಯಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣನವರ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ. ಧಾರ್ಮಿಕ ನಂಬಿಕೆಗಳು ನಮ್ಮ ದೌರ್ಬಲ್ಯವಲ್ಲ, ಅದು ಈ ಮಣ್ಣಿನ ಶಕ್ತಿಯಾಗಿದೆ. ಯಾವುದೇ ಧರ್ಮ ಇನ್ನೊಬ್ಬರ ಮನಸ್ಸಿಗೆ ನೋವು ಮಾಡಬಾರದು. ಬದಲಿಗೆ ಇನ್ನೊಬ್ಬರ ನೋವಿಗೆ ಮುಲಾಮು ಆಗಬೇಕಾಗಿದೆ. ಇಂತಹ ಹಲವಾರು ತತ್ವ- ಆದರ್ಶಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಜವಾಬ್ದಾರಿ ಸಮಾಜದ ಸ್ವಾಮೀಜಿಗಳ ಮೇಲಿದೆ ಎಂದ ಅವರು, ಮಾನವೀಯ ಮೌಲ್ಯಗಳು ಮಾತ್ರ ಸಮಾಜದಲ್ಲಿ ಪ್ರಮುಖವಾಗಬೇಕು ಎಂದರು.
- - -