ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶರಣರ ದೃಷ್ಟಿಯಲ್ಲಿ ಭಕ್ತಿ, ಜ್ಞಾನ, ವೈರಾಗ್ಯಗಳು ಎಷ್ಟು ಮುಖ್ಯವೋ ಅಷ್ಟೇ ದಿನನಿತ್ಯದ ನಿರ್ವಹಣೆಗಾಗಿ ಕಾಯಕವು ಅಷ್ಟೇ ಮುಖ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರುನಗರದ ಸಿದ್ದವೀರಪ್ಪ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಆಂಜನೇಯ ಬಡಾವಣೆ, ಎಂಸಿಸಿ ಬಿ ಬ್ಲಾಕ್ ನಾಗರಿಕರು ಹಮ್ಮಿಕೊಂಡ ಬಸವ ಜಯಂತಿ ಹಾಗೂ ಸಿದ್ದಗಂಗಾ ಸ್ವಾಮೀಜಿ, ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರು ಜಗತ್ತಿಗೆ ಆದರ್ಶವಾದ ಕಾಯಕತತ್ವ ನೀಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಬೇಕು. ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯಶುದ್ಧವಾದ ದುಡಿಮೆಯೇ ಶ್ರಮ, ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು. ದುಡಿಯುವವರೇ ಬೇರೆ, ಅವರ ದುಡಿತದ ಫಲವನ್ನು ಅನುಭವಿಸುವವರೇ ಬೇರೆಯಾಗಿದ್ದ ಕಾಲದಲ್ಲಿ ತನು ಮನ ಬಳಲಿಸಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ಎಂದರು.ಕಾಯಕದಿಂದ ಬಂದ ಪ್ರತಿಫಲ ದಾಸೋಹ ಮಾಡಬೇಕು. ದಾಸೋಹ ನಡೆಯುವ ಸಮಯದಲ್ಲಿ ಎಲ್ಲರೂ ಸಮಾನವಾಗಿ ಕುಳಿತು ಸಹಭೋಜನ ಮಾಡಿದ್ದರಿಂದ ಸಮಾನತೆ ಸಾಧಿಸಲು ಸಾಧ್ಯವಾಯಿತು. ಬಸವಣ್ಣ ಈ ಆಧುನಿಕ ಯುಗಕ್ಕೆ ಬೇಕಾದ ಶಸ್ತ್ರಚಿಕಿತ್ಸಕ ವೈದ್ಯ. ಇಂದಿನ ಸಮಾಜದಲ್ಲಿರುವ ಭಯೋತ್ಪಾದನೆ, ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ಹಿಂಸಾಚಾರ, ದಬ್ಬಾಳಿಕೆ ಎಂಬ ಸಮಾಜದ ರೋಗ ಹೊಡೆದೊಡಿಸಲು ಬಸವತತ್ವ ಎಂಬ ಔಷಧಿ ನೀಡಬೇಕು ಎಂದು ಶ್ರೀಗಳು ಹೇಳಿದರು. ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಕೆ.ಲಿಂಗರಾಜ ಉಪನ್ಯಾಸ ನೀಡಿ, ಸಮ ಸಮಾಜವನ್ನು ಬಸವಣ್ಣನವರು 12ನೇ ಶತಮಾನದಲ್ಲಿ ಕಟ್ಟಿದರು. ವ್ಯಕ್ತಿ ಮತ್ತು ಸಮಾಜದ ಉದ್ಧಾರಕ್ಕಾಗಿ ಕಾಯಕ ಮತ್ತು ದಾಸೋಹ ತತ್ವ ನೀಡಿದರು ಎಂದರು.
ಇದೇ ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಂಕ್ ಗಳಿಸಿದ ಸೌಭಾಗ್ಯ ಬೀಳಗಿಮಠ ಪರವಾಗಿ ಅವರ ತಾಯಿ ಶರಣಮ್ಮ ಹಾಗೂ ಯೋಗಗುರು ಜ್ಞಾನಚಂದ್ರರಿಗೆ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೆ.ಬಿ.ಪರಮೇಶ್ವರಪ್ಪ, ದಾಸೋಹಿ ಟಿ.ಜಿ.ಲೀಲಾವತಿ ಭಕ್ತಮಂಡಳಿಯ ವಿಶ್ವನಾಥ, ಕಾರ್ಯದರ್ಶಿ ರವಿಶಂಕರ, ಕರಿಬಸಪ್ಪ, ಡಾ.ಲಿಂಗರಾಜ, ಕೆ.ಶಶಿಧರ, ಶಶಿಧರ ಬಸಾಪುರ, ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ಕಾರ್ಯಕ್ರಮನ್ನು ನೀಡಿದರು.