ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಬೆಂಗಳೂರಿನಲ್ಲಿ ಶನಿವಾರ ನಡೆದ ‘ಆದಿವಾಸಿಗಳ ಜಗತ್ತು ಮತ್ತು ಅಭಿವೃದ್ಧಿಯ ಸವಾಲುಗಳು’ ಎಂಬ ವಿಚಾರ ಸಂಕಿರಣದಲ್ಲಿ ಡಾ. ಉಮಾ ರಾಮ್ ಮತ್ತು ಕೆ.ಎಸ್. ರಾಮ್ ಸಂಪಾದಕತ್ವದ ‘ಬಸ್ತರ್ 1862: ಎ ಕೊಲೋನಿಯಲ್ ರಿಪೋರ್ಟ್ ಆ್ಯಂಡ್ ಆನ್ ಆದಿವಾಸಿ ರೆಸಿಸ್ಟನ್ಸ್’ ಎಂಬ ಪುಸ್ತಕವನ್ನು ಯುನೆಸ್ಕೋದ ಮಾಜಿ ರಾಯಭಾರಿ ಡಾ. ಚಿರಂಜೀವ್ ಸಿಂಗ್ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು, ‘ಬಸ್ತರ್ 1862’ ಕೃತಿಯು ವಸಾಹತುಶಾಹಿ ಮತ್ತು ಪ್ರಾದೇಶಿಕ ಕಣ್ಣುಗಳ ಮೂಲಕ ಇತಿಹಾಸವನ್ನು ನೋಡುವ ಮಹತ್ವದ ಕೃತಿಯಾಗಿದೆ. ಈ ಕೃತಿಯು ಕ್ಯಾಪ್ಟನ್ ಗ್ಲಾಸ್ಫರ್ಡ್ರ ವರದಿ ಮತ್ತು ಮಹಾರಾಜ ಪ್ರವೀರ್ ಚಂದ್ರ ಭಂಜದೇವ್ರ ಕಥನದ ಕುರಿತು ಚರ್ಚೆ ಉಂಟುಮಾಡಬಲ್ಲ ಕೃತಿಯಾಗಿದೆ. ಲೇಖಕರು ಈ ಕೃತಿಯ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ವಿಚಾರ ಸಂಕಿರಣದಲ್ಲಿ ಹಾಜರಿದ್ದ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಪ್ರಾದೇಶಿಕ ನಿರ್ದೇಶಕಿ ಡಾ. ಎಸ್. ಕೆ. ಅರುಣಿ, ಈ ಪುಸ್ತಕವು ಒಂದು ಮಹತ್ವದ ಪ್ರಮುಖ ಐತಿಹಾಸಿಕ ಮೂಲ ದಾಖಲೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.ಹಿಂದೆ ಬಸ್ತರ್ನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪ್ರವೀರ್ ಕೃಷ್ಣ ಮಾತನಾಡಿ, ಸೂಕ್ಷ್ಮ-ಮಾರುಕಟ್ಟೆಗಳನ್ನು ಕಲ್ಪಿಸಿದ ಕಾರಣ ಬಸ್ತರ್ನ ಆದಿವಾಸಿಗಳು ಹುಣಸೆ ಮತ್ತು ಇತರ ಅರಣ್ಯಮೂಲದ ಉತ್ಪನ್ನಗಳಿಂದ ತಮ್ಮ ಆದಾಯ ಹೆಚ್ಚಿಸಲು ಸಹಾಯವಾಗಿದೆ ಎಂದು ಹೇಳಿದರು.
ಆದಿವಾಸಿಗಳ ಸಬಲೀಕರಣಕ್ಕೆ ಮಾಡಿದ ಯೋಜನೆಗಳಿಗೆ 2022ರಲ್ಲಿ ಯುಎನ್ಓದ ಎಫ್ಎಓ ಮನ್ನಣೆ ಸಿಕ್ಕ ವಿಚಾರವನ್ನೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.‘ಬಸ್ತರ್ 1862’ ಮಣಿಪಾಲ್ ಯೂನಿವರ್ಸಲ್ ಪ್ರೆಸ್ನಿಂದ ಪ್ರಕಟವಾದ ಪ್ರೊ. ಡಿ.ಎಸ್. ಅಚ್ಯುತ ರಾವ್ ಇತಿಹಾಸ ಸರಣಿಯ 10ನೇ ಕೃತಿಯಾಗಿರುವುದು ಗಮನಾರ್ಹವಾಗಿದೆ. ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಮತ್ತು ಡಿಎಸ್ಎ ಹಿಸ್ಟರಿ ಸರಣಿಯು ಭಾರತದ ವಿವಿಧ ಐತಿಹಾಸಿಕ ಕಥನಗಳ ಸಂರಕ್ಷಣೆ ಮತ್ತು ಪ್ರಸಾರದ ಕಡೆಗೆ ಗಮನ ನೀಡಿದೆ. ವಿಶೇಷವಾಗಿ ಸಂಶೋಧಕರು ಮತ್ತು ಸಾರ್ವಜನಿಕರಿಗೆ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗ್ರಂಥಗಳನ್ನು ಒದಗಿಸುತ್ತಿದೆ.