ಸರ್ಕಾರದ ನೆರವಿಲ್ಲದೆ ಗ್ರಾಮದ ಸರ್ಕಾರಿ ಶಾಲೆಯನ್ನು ಜೀರ್ಣೋದ್ಧಾರ ಮಾಡುವ ಮೂಲಕ ಬೇವಿನಹಳ್ಳಿ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಕೂಡ ಕೈಜೋಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ನೆರವಿಲ್ಲದೆ ಗ್ರಾಮದ ಸರ್ಕಾರಿ ಶಾಲೆಯನ್ನು ಜೀರ್ಣೋದ್ಧಾರ ಮಾಡುವ ಮೂಲಕ ಬೇವಿನಹಳ್ಳಿ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಕೂಡ ಕೈಜೋಡಿಸಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಹೇಳಿದರು.

ಗ್ರಾಮಸ್ಥರ ಆಹ್ವಾನದ ಮೇರೆಗೆ ಶನಿವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿಗೆ ಭೇಟಿ ನೀಡಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಇದೊಂದು ವಿನೂತನ ಕಾರ್ಯ. ಸರ್ಕಾರವೂ ನಾಚುವಂತಹ ಕೆಲಸವನ್ನು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ತಮ್ಮ ಗ್ರಾಮದ ಮಕ್ಕಳಿಗೆ ಅನುಕೂಲವಾಗಬೇಕೆನ್ನುವ ಅವರ ನಿರ್ಧಾರ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂದಾಜು ೬೫ ಲಕ್ಷ ರು. ವೆಚ್ಚದಲ್ಲಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆದರೆ ಇಂತಹ ಪುಣ್ಯದ ಕೆಲಸಕ್ಕೆ ತಾನೇ ಬರುವುದಾಗಿ ಹೇಳಿದ್ದೆ. ಅದರಂತೆ ಇಲ್ಲಿಗೆ ಬಂದು ನೋಡಿದಾಗ ಖುಷಿಯಾಯಿತು. ಇಂತಹ ಒಳ್ಳೆಯ ಕೆಲಸಕ್ಕೆ ಖಂಡಿತಾ ನಾನು ಕೈಜೋಡಿಸುತ್ತೇನೆ. ಗ್ರಾಮಸ್ಥರ ಅಪೇಕ್ಷೆಯಂತೆ ಒಂದು ಲಕ್ಷ ರು. ವೆಚ್ಚದ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುವುದು. ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಮೂಲಕ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗೆ ನೆರವು ನೀಡುವ ಕೆಲಸವನ್ನು ಹಲವು ವರ್ಷದಿಂದ ಮಾಡಿಕೊಂಡು ಬರಲಾಗುತ್ತಿದೆ. ಈಗಾಗಲೇ ಕಂಪ್ಯೂಟರ್, ಪ್ರೊಜೆಕ್ಟರ್, ಸಮವಸ್ತ್ರ ಸೇರಿದಂತೆ ಟ್ರಸ್ಟ್‌ನಿಂದಾಗುವ ಸೇವೆ ಮಾಡಲಾಗಿದೆ. ಅದೇ ರೀತಿ ಈ ಶಾಲೆಯ ಅಭಿವೃದ್ಧಿಗೂ ಸಹಕರಿಸಲಾಗುವುದು ಎಂದರು.

ಇನ್ನು ಇದೇ ಶಾಲೆಗೆ ಸಂಬಂಧಿಸಿದಂತೆ ಹಿಂದೆಯೇ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಿಎಸ್‌ಆರ್ ಅನುದಾನ ಕೊಡಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅವರನ್ನು ಭೇಟಿಯಾಗಿ ಮನವಿ ಮಾಡೋಣ. ಇಂತಹ ಒಳ್ಳೆಯ ಕೆಲಸಕ್ಕೆ ಸರ್ಕಾರ ಪೂರಕವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಬೇವಿನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಎಂ.ಮಹೇಶ್, ಸೋಮಶಂಕರೇಗೌಡ, ಹೊನ್ನಲಿಂಗೇಗೌಡ, ಮಾದೇಗೌಡ, ಮಾಯಿಗೌಡ, ನಾಗರಾಜು, ಸುಭಾಷ್, ಚೇತನ್, ಶೇಖರ್, ಶಿವಕುಮಾರ್, ಕುಮಾರ್, ರಾಜು, ಮಾದು, ಲತಾ, ರಮ್ಯಾ, ಪ್ರೇಮಕುಮಾರಿ, ಅಭಿ, ಯೋಗೀಶ್, ಮಂಜು ಇದ್ದರು.