ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಬಿಸಿಲಿನ ಝಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮಂಗನ ಕಾಯಿಲೆ ಸೋಂಕು ತೀವ್ರ ಗತಿಯಲ್ಲಿ ವ್ಯಾಪಿಸುವ ಸಾಧ್ಯತೆ ಇರುವ ಕಾರಣ ತಾಲೂಕಿನಾದ್ಯಂತ ಗ್ರಾಪಂ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತೀರ್ಥಹಳ್ಳಿ ತಾಪಂ ಇಒ ಎಂ.ಶೈಲಾ ಹೇಳಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ, ತಾಲೂಕಿನ ಅರಳಸುರುಳಿ, ತ್ರಿಯಂಬಕಪುರ ಮತ್ತು ಸಾಲ್ಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಮಂಗನ ಖಾಯಿಲೆ ತೀವ್ರತೆ ಇರುವ ಕಾರಣ ಜನರನ್ನು ಜಾಗೃತಿಗೊಳಿಸುವ ಜೊತೆಗೆ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ತೀವ್ರ ನಿಗಾ ವಹಿಸುವ ಅಗತ್ಯವಿದೆ. ಬಿಸಿಲಿನ ಝಳ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚು ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಈ ಪಿಡುಗಿಗೆ ಈಗಾಗಲೇ ಸಾಲ್ಗಡಿ ಗ್ರಾಪಂ ವ್ಯಾಪ್ತಿಯ ಒಬ್ಬ ಯುವಕ ಕೂಡಾ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕೆಲವರು ಈ ಸೋಂಕಿನಿಂದ ನರಳುತ್ತಿದ್ದಾರೆ. ಈ ವರ್ಷ ಅರಳಸುರುಳಿ, ತ್ರಯಂಬಕಪುರ ಮತ್ತು ಸಾಲ್ಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಮಂಗನ ಖಾಯಿಲೆ ತೀವ್ರತೆ ಹೆಚ್ಚಿದೆ. ಆಶಾ ಕಾರ್ಯಕರ್ತೆಯರ ನೆರವನ್ನು ಪಡೆದು ಈ ಗ್ರಾಪಂಗಳ ವ್ಯಾಪ್ತಿಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಜನರಲ್ಲಿ ಎಚ್ಚರಿಕೆ ಮೂಡಿಸಬೇಕಿದೆ. ಜ್ವರ ವಾಂತಿ ಭೇದಿ ಯಾವುದೇ ತರಹದ ಸಮಸ್ಯೆ ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆಗೆ ಮನಮಾಡದಂತೆ ಎಚ್ಚರಿಸಬೇಕು. ಜನರಲ್ಲಿ ರಕ್ತ ಪರೀಕ್ಷೆಯ ಬಗ್ಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸುವುದು ಕೂಡ ಮುಖ್ಯ ಎಂದು ಹೇಳಿದರು.

ತಾಲೂಕಿನಲ್ಲಿ ಈ ವರೆಗೆ 16 ಪ್ರಕರಣಗಳು ದಾಖಲಾಗಿದ್ದು ಒಂದು ಸಾವು ಸಂಭವಿಸಿದೆ. ಇಬ್ಬರು ಸೋಂಕಿತರು ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಒಬ್ಬ ರೋಗಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಳಸುರುಳಿ ತ್ರಯಂಬಕಪುರ ಗ್ರಾಪಂ ವ್ಯಾಪ್ತಿಯ ಅಕ್ಲಾಪುರ ಮತ್ತು ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊನ್ನೇಕೇರಿ ಗ್ರಾಮ ಹೈ-ರಿಸ್ಕ್ ಪ್ರದೇಶಗಳಾಗಿವೆ. ಉಳಿದಂತೆ ಮಹಿಷಿ, ಕುಡುಮಲ್ಲಿಗೆ ಮತ್ತು ಬಸವಾನಿ ಭಾಗದಲ್ಲೂ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ತಾಲೂಕು ವೈಧ್ಯಾಧಿಕಾರಿ ಡಾ. ಅನಿಕೇತನ್ ವಿವರಣೆ ನೀಡಿದರು.


ಅರಳಸುರುಳಿ, ದೇವಂಗಿ,ಕಟಗಾರು ಮತ್ತು ಹಾರೋಗುಳಿಗೆ ವೈಧ್ಯಾಧಿಕಾರಿಗಳು ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.