ತಹಸೀಲ್ದಾರ್ ಕಡೆಯಿಂದ ಪಡೆದ ಕಾಯಂ ವಾಸಸ್ಥಳ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ. ಈ ಮೇಲಿನ ಯಾವುದಾದರೂ ಒಂದು ಸೂಕ್ತ ದಾಖಲೆಯನ್ನು ಹಾಜರುಪಡಿಸುವ ಮೂಲಕ, ನಮ್ಮ ಭಾಗದ ಯಾವುದೇ ಬಡವರು, ಅಲ್ಪಸಂಖ್ಯಾತರು ಹಾಗೂ ಅರ್ಹ ಮತದಾರರು ಪಟ್ಟಿಯಿಂದ ಹೊರಹೋಗದಂತೆ ಬಿ.ಎಲ್.ಎ ಪದಾಧಿಕಾರಿಗಳು ಜಾಗ್ರತೆ ವಹಿಸಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ- ೨ ಪದಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರೂ ತರಬೇತಿ ಪಡೆದು ಮನೆಮನೆಗೆ ಭೇಟಿ ನೀಡಿ, ಅರ್ಹರ ಹೆಸರುಗಳು ಮತದಾರರ ಪಟ್ಟಿಯಿಂದ ಅನಾವಶ್ಯಕವಾಗಿ ವಜಾಗೊಳ್ಳದಂತೆ ನೋಡಿಕೊಳ್ಳುವ ಮೂಲಕ ಪ್ರಜಾತಂತ್ರವನ್ನು ರಕ್ಷಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಪಟ್ಟಣದ ಶ್ರೀ ಅನ್ನಪೂರ್ಣೇಶ್ವರಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯಪುರ, ದೇವನಹಳ್ಳಿ ಹಾಗೂ ತೂಬಗೆರೆ ಮೂರು ಬ್ಲಾಕ್‌ಗಳ ನೂತನ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಣೆ ಹಾಗೂ ಎಸ್ ಐಆರ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ತವ್ಯ ಲೋಪವೆಸಗಿದರೆ ಕಠಿಣ ಕ್ರಮ:

ಪಕ್ಷದ ಸಂಘಟನೆಯಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ನಿಲುವು ವ್ಯಕ್ತಪಡಿಸಿದ ಸಚಿವರು, ಈಗಾಗಲೇ ನೇಮಿಸಲಾಗಿರುವ ಬಿಎಲ್ ಎ- ೨ ಪದಾಧಿಕಾರಿಗಳಲ್ಲಿ ಯಾರು ತರಬೇತಿ ಶಿಬಿರಗಳಿಗೆ ಹಾಗೂ ಪಕ್ಷದ ಕಾರ್ಯಕ್ರಮಗಳಿಗೆ ಗೈರು ಹಾಜರಾಗುತ್ತಿದ್ದಾರೋ, ಅಂತವರನ್ನು ಕೂಡಲೇ ಬದಲಾಯಿಸಿ. ಅವರ ಜಾಗಕ್ಕೆ ಪಕ್ಷದ ಬೆಳವಣಿಗೆಯ ಬಗ್ಗೆ ಮುತುವರ್ಜಿ ಮತ್ತು ಆಸಕ್ತಿ ಇರುವ ಸಕ್ರಿಯ ಕಾರ್ಯಕರ್ತರನ್ನು ನೇಮಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಡವರು, ಅಲ್ಪಸಂಖ್ಯಾತರ ಹೆಸರು ಕೈಬಿಡದಂತೆ ನೋಡಿಕೊಳ್ಳಿ: ಕೆಪಿಸಿಸಿ ಕಾರ್ಯದರ್ಶಿ ವಿ. ಮಂಜುನಾಥ್ ಮಾತನಾಡಿ, ಬಿ.ಎಲ್.ಎ-೨ ಕಾರ್ಯಕರ್ತರು ೨೦೦೨ ಹಾಗೂ ೨೦೨೫ರ ಮತದಾರರ ಪಟ್ಟಿಗಳನ್ನು ಇಟ್ಟುಕೊಂಡು ಸೂಕ್ತ ಪರಿಶೀಲನೆ ನಡೆಸಬೇಕು. ಚುನಾವಣಾ ಆಯೋಗವು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಲು ಸಾರ್ವಜನಿಕರಿಗೆ ನೆರವಾಗಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಚುನಾವಣಾ ಆಯೋಗ ಪರಿಗಣಿಸುವ ಪ್ರಮುಖ ದಾಖಲೆಗಳ ವಿವರಗಳನ್ನು ಅವರು ಈ ವೇಳೆ ನೀಡಿದರು.

೧೯೮೭ ಕ್ಕಿಂತ ಮುಂಚಿನ ಬ್ಯಾಂಕ್ ಅಕೌಂಟ್, ಎಲ್.ಐ.ಸಿ ಪಾಲಿಸಿ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ದಾಖಲೆಗಳು.

ಜನ್ಮ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಅಥವಾ ಟಿ.ಸಿ .

ತಹಸೀಲ್ದಾರ್ ಕಡೆಯಿಂದ ಪಡೆದ ಕಾಯಂ ವಾಸಸ್ಥಳ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ. ಈ ಮೇಲಿನ ಯಾವುದಾದರೂ ಒಂದು ಸೂಕ್ತ ದಾಖಲೆಯನ್ನು ಹಾಜರುಪಡಿಸುವ ಮೂಲಕ, ನಮ್ಮ ಭಾಗದ ಯಾವುದೇ ಬಡವರು, ಅಲ್ಪಸಂಖ್ಯಾತರು ಹಾಗೂ ಅರ್ಹ ಮತದಾರರು ಪಟ್ಟಿಯಿಂದ ಹೊರಹೋಗದಂತೆ ಬಿ.ಎಲ್.ಎ ಪದಾಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್. ಗೌಡ, ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಮಂಜುನಾಥ್ ಹಾಗೂ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ಧಪ್ಪ, ಪುರಸಭೆ ಅಧ್ಯಕ್ಷರಾದ ಭವ್ಯ ಮಹೇಶ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎಂ. ಸತೀಶ್ ಕುಮಾರ್, ಪುರಸಭೆ ಸದಸ್ಯರಾದ ನಂದಕುಮಾರ್, ಇಕ್ಬಾಲ್, ರಾಜಣ್ಣ, ಮಂಜುಳಾ, ಮುನಿರಾಜು, ನಾರಾಯಣಸ್ವಾಮಿ, ಮಾಜಿ ಸದಸ್ಯರಾದ ಮುನಿಚಿನ್ನಪ್ಪ, ಸಂಪತ್ ಕುಮಾರ್, ಮುನಿಕೃಷ್ಣ ಭಾಗವಹಿಸಿದ್ದರು.

ವೇದಿಕೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಸದಸ್ಯರಾದ ರಾಮಚಂದ್ರಪ್ಪ, ಪ್ರಸನ್ನ ಕುಮಾರ್,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಎಸ್.ಸಿ.ಘಟಕದ ಅಧ್ಯಕ್ಷ ಮುದುಗುರ್ಕಿ ನಾರಾಯಣಸ್ವಾಮಿ, ಚೀಮಾಚನಹಳ್ಳಿ ಸಿ.ಕೆ. ರಾಮಚಂದ್ರಪ್ಪ, ಅಣ್ಣೇಶ್ವರ ಚಂದ್ರಶೇಖರ್, ಹಿತ್ತರಹಳ್ಳಿ ರಮೇಶ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ. ನಾಗರಾಜು, ಕಾರ್ಯದರ್ಶಿ ಕೋಕಾಕೋಲಾ ಮಂಜುನಾಥ್ ಸೇರಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.