ಕನ್ನಡಪ್ರಭ ವಾರ್ತೆ ಬಾಗೂರು

ತಾಲೂಕಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ 10 ಕೋಟಿ ರು. ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶನಿವಾರ ತಿಳಿಸಿದರು.ಹೋಬಳಿಯ ವಳಗೇರಹಳ್ಳಿ ಬಡಾವಣೆಗಳಿಗೆ ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನಲ್ಲೇ ವಳಗೆರಹಳ್ಳಿ ದೊಡ್ಡ ಹಳ್ಳಿಯಾಗಿದ್ದು ಎಲ್ಲಾ ಬಡಾವಣೆಗಳಿಗೂ ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸಲಾಗುವುದು. ತಾಲೂಕಿನಲ್ಲಿ ಅಧಿಕೃತವಾಗಿ 60 ಸಾವಿರ ರೈತರ ಕೊಳವೆ ಬಾವಿಗಳಿವೆ ಅನಧಿಕೃತವಾದ 6 ಸಾವಿರ ಕೊಳವೆಬಾವಿಗಳಿಗೆ ರೈತರು ನೋಂದಣಿಗೆ ಹಣ ಕಟ್ಟಿ ಸಕ್ರಮ ಮಾಡಿಕೊಳ್ಳಿ. ಟ್ರಾನ್ಸ್‌ಫಾರ್ಮಾಗಳು ಸುಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ತಾಲೂಕಿನ ರೈತರ ಕೊಳವೆ ಬಾವಿಗಳ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಸುಟ್ಟರೆ 24 ಗಂಟೆ ಒಳಗೆ ಹಾಕಿಸಲಾಗುತ್ತಿದೆ. ತಾಲೂಕಿನ ರೈತರ ಹಿತದೃಷ್ಟಿಯಿಂದ ಕಲ್ಕೆರೆ ಹತ್ತಿರ 220 ಕೆ ವಿ ರಿಸೀವಿಂಗ್ ಸ್ಟೇಷನ್ ಸ್ಥಾಪನೆಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 2ನೇ ದೊಡ್ಡ ಕೆರೆಯಾಗಿರುವ ಅಣತಿ ಕೆರೆಗೆ ಹೇಮಾವತಿ ನದಿ ನೀರು ಹರಿಸಲು 60 ಲಕ್ಷ ಹಾಗೂ ನಿಂಗಳಅಕ್ಕನ ಕೆರೆ ತುಂಬಿಸುವ ಮೋಟರ್‌ ಅಳವಡಿಸಲು 25 ಲಕ್ಷ ಹಣ ನೀಡಿದ್ದೇನೆ. ಇದರಿಂದ ಈ ಭಾಗದ ತೆಂಗು ಬೆಳೆ ಉಳಿಸಲು ಅಂತರ್ಜಲ ಅಭಿವೃದ್ಧಿಯಾಗಿದೆ ಎಂದರು. ನವಿಲೇ ಏತ ನೀರಾವರಿ ಯೋಜನೆಯನ್ನು ಬಲವರ್ಧನೆಗೊಳಿಸಿ ಬಿದರೆ, ಕೆಂಬಾಳು, ಬಳಗಟ್ಟೆ, ಶಿವರ, ತಗಡೂರು, ಸೇರಿದಂತೆ ಬಾಗುರು ಹೋಬಳಿಯ ಎಲ್ಲಾ ಕೆರೆಗಳಿಗೆ ಹೇಮಾವತಿ ನದಿ ನೀರು ತುಂಬಿಸಲಾಗಿದೆ. ಇದರಿಂದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ರೈತರ ಕೃಷಿ ಬದುಕಿಗೆ ಕೊಳವೆ ಬಾವಿಗಳನ್ನು ಕೊರೆಸಲು ಬಡ್ಡಿ ಸಾಲ ಮಾಡಬೇಕಾದ ಪರಿಸ್ಥಿತಿ ಈ ವರ್ಷದಲ್ಲಿ ಕಾಣುತ್ತಿಲ್ಲ ಎಂದು ತಿಳಿಸಿದರು. ಬೀರಲಿಂಗೇಶ್ವರ ಸ್ವಾಮಿ ದೇಗುಲದ ರಸ್ತೆಯ ಪಿಕಪ್ ನಿರ್ಮಾಣಕ್ಕೆ 1 ಕೋಟಿ ಹಣ ಬಿಡುಗಡೆಯಾಗಿದೆ. ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 250 ಹಸುಗಳ ಮ್ಯಾಟ್ ಕೊಡಿಸಲಾಗಿದೆ, ಆಂಜನೇಯ ಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ 5 ಲಕ್ಷ ರು. ಹಣ ನೀಡಲಾಗಿದೆ. ಭೈರವೇಶ್ವರ ಸ್ವಾಮಿ ದೇಗುಲದ ರಸ್ತೆ, ಗ್ರಾಮದ ಉತ್ತರ ಬಡಾವಣೆ ರಸ್ತೆ, ಮಾಡಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಎಂಜಿನಿಯರ್‌ಗಳಾದ ವೆಂಕಟೇಶ್, ಪ್ರದೀಪ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ನಿಮಿಷಾಂಬಾ ಎಲೆಕ್ಟ್ರಿಕಲ್ ಗುತ್ತಿಗೆದಾರ ಜಯರಾಮ್, ಮುಖಂಡರುಗಳಾದ ಸಾಗರ್ ಗೌಡ, ಬೋರೇಗೌಡ, ಅಶೋಕ್, ಗಿರೀಶ್, ಚಿಕ್ಕೇಗೌಡ, ಎಚ್. ಪಿ. ಸಂಪತ್ ಕುಮಾರ್‌, ಈಶಣ್ಣ, ಶಂಬಣ್ಣ, ಹಿಂಡಲೇಗೌಡ, ಇತರರು ಹಾಜರಿದ್ದರು.