ಶೈಕ್ಷಣಿಕ ಸಾಧನೆಗೆ ಶ್ರದ್ಧೆ ಇರಲಿ: ಉಪನ್ಯಾಸಕ ಸತೀಶ

| Published : May 26 2025, 01:14 AM IST

ಶೈಕ್ಷಣಿಕ ಸಾಧನೆಗೆ ಶ್ರದ್ಧೆ ಇರಲಿ: ಉಪನ್ಯಾಸಕ ಸತೀಶ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಸಾಧನೆಗೆ ಶ್ರದ್ಧೆ ಹಾಗೂ ತ್ಯಾಗ, ಬಹುಮುಖ್ಯ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಶೈಕ್ಷಣಿಕ ಸಾಧನೆಗೆ ಶ್ರದ್ಧೆ ಹಾಗೂ ತ್ಯಾಗ, ಬಹುಮುಖ್ಯ ಎಂದು ಮ ಮ ಪಾಟೀಲ್ ಕಾಲೇಜಿನ ಉಪನ್ಯಾಸಕ ಡಿ. ಸತೀಶ್ ಹೇಳಿದರು.

ತಾಲೂಕಿನ ಹೊಳಗುಂದಿ ಗ್ರಾಮದ ಚೌಡಿ ಕಟ್ಟೆಯಲ್ಲಿ ಸಾಮಾಜಿಕ ಪರಿವರ್ತನಾ ಸೇವಾ ಸಮಿತಿ ಹಮ್ಮಿಕೊಂಡಿದ್ದ, 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಂದೆ-ತಾಯಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರದ್ಧೆ ಇಟ್ಟು ಅಧ್ಯಯನ ಮಾಡಿದರೆ, ಯಶಸ್ಸು ಸಾಧ್ಯ ಎಂಬುದಕ್ಕೆ ಇಂದಿನ ಪುರಸ್ಕೃತರು ಸಾಕ್ಷಿ ಎಂದು ಅವರು, ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನ ಆಯ್ಕೆ ಮಾಡಿಕೊಳ್ಳಬೇಕು. ವಿಜ್ಞಾನ ವಿಭಾಗದಲ್ಲಿ ಭವಿಷ್ಯದ ಅವಕಾಶಗಳು ಹೆಚ್ಚಾಗಿವೆ. ಅಲ್ಲದೆ ವಿಜ್ಞಾನ ವಿಷಯವು ಕಬ್ಬಿಣದ ಕಡಲೆಯಲ್ಲ. ನಾವು ಅಭ್ಯಾಸದ ಕಡೆಗೆ ಹೆಚ್ಚು ಗಮನ ವಹಿಸಬೇಕು, ಇಂದು ನಮ್ಮ ಮಕ್ಕಳು ಮೊಬೈಲ್ ಗೀಳನ್ನ ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ. ಮೊಬೈಲ್ ಬಳಕೆಯ ಕುರಿತು ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳಬೇಕು. ಇದಕ್ಕೆ ಪೋಷಕರು ಸಹಕರಿಸಬೇಕು. ಇಂದಿನ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದೆ. ನಾವು ಉನ್ನತ ಹುದ್ದೆಯನ್ನು ಪಡೆದರೂ, ಮಾನವೀಯ ಮೌಲ್ಯ ಮರೆಯಬಾರದು. ನಮ್ಮ ಗುರು-ಹಿರಿಯರನ್ನು ಗೌರವಿಸಬೇಕು. ನಮ್ಮ ಮನೆಯ ಹಿರಿಯರು ಯಾವುದೇ ಕಾರಣಕ್ಕೂ ಅನಾಥಾಶ್ರಮವನ್ನು ಸೇರಬಾರದು ಎಂಬ ಕಿವಿಮಾತು ಹೇಳಿದರು.

ಪರಿವರ್ತನಾ ಸೇವಾ ಸಮಿತಿ ಮುಂದಿನ ದಿನಗಳಲ್ಲಿ ಹೊಳಗುಂದಿ ಗ್ರಾಮದ ಮಕ್ಕಳಿಗಾಗಿ ಉಚಿತ ಗ್ರಂಥಾಲಯ ವ್ಯವಸ್ಥೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಳ್ಳುವುದು, ಮಕ್ಕಳ ಪತ್ರಿಕೆಯನ್ನು ಹೊರತರುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳಿಗೆ ತರಬೇತಿಯನ್ನು ಆಯೋಜಿಸುವುದು, ರಂಗ ತರಬೇತಿಯನ್ನ ಆಯೋಜಿಸುವುದು, ಹೀಗೆ ವಿವಿಧ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಮಿತಿ ಸಹಕರಿಸಲಿದೆ ಎಂದು ಸಮಿತಿಯ ಸಂಚಾಲಕರು ತಿಳಿಸಿದರು.

2024-25 ಸಾಲಿನಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ 22 ವಿದ್ಯಾರ್ಥಿಗಳಿಗೆ ಸಮಿತಿಯಿಂದ ಗೌರವ ಸನ್ಮಾನ ಮಾಡಲಾಯಿತು.

ಈ ಸಂದರ್ಭ ನಿವೃತ್ತ ಶಿಕ್ಷಕ ಎಂ.ಶಂಭುಲಿಂಗಪ್ಪ, ಸಾಣದ ರುದ್ರಪ್ಪ, ಹಾವನೂರ್ ಚಂದ್ರಶೇಖರ್, ದ್ವಾರಕೀಶ ರೆಡ್ಡಿ ಉಪಸ್ಥಿತರಿದ್ದರು. ಸಮಾಜ ಸೇವಾ ಪರಿವರ್ತನಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.