ಸಾರಾಂಶ
ಸುಂಟಿಕೊಪ್ಪ ಹೋಬಳಿ ಮಳೆಗೆ ನಲುಗಿ ಹೋಗಿದೆ. ಭಾರಿ ಮಳೆಗೆ ಮಾರುಕಟ್ಟೆ ನರಕ ಸದೃಶವಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಸುಂಟಿಕೊಪ್ಪ ಹೋಬಳಿ ಕೂಡ ಗಾಳಿ ಮಳೆಗೆ ನಲುಗಿ ಹೋಗಿದೆ. ಭಾನುವಾರ ಸುಂಟಿಕೊಪ್ಪ ಸಂತೆಯ ದಿನವಾಗಿದ್ದು, ಭಾರಿ ಮಳೆಗೆ ಮಾರುಕಟ್ಟೆ ನರಕಸದೃಶವಾಯಿತು.ಮೊದಲೇ ಅವ್ಯವಸ್ಥೆಗಳ ಆಗರವಾಗಿರುವ ಮಾರುಕಟ್ಟೆ, ಶನಿವಾರ ಮತ್ತು ಭಾನುವಾರ ಸುರಿದ ಭಾರಿ ಮಳೆಗೆ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸಿತ್ತು. ಮಾರುಕಟ್ಟೆ ರಸ್ತೆಯಲ್ಲಿ ಮೊಣಕಾಲು ವರೆಗೆ ನೀರು ನಿಂತಿದ್ದು, ಜನರು ಸಂಚಾರಕ್ಕೆ ಹರಸಾಹಸ ಪಟ್ಟರು. ವ್ಯಾಪಾರಸ್ಥರು ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡುವುದು ಕಂಡು ಬಂತು.ಭಾರಿ ಮಳೆಯಿಂದ ಸುಂಟಿಕೊಪ್ಪ ಹೋಬಳಿಯಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತ, ಮರಗಳು ಬಿದ್ದಿರುವುದು, ವಿದ್ಯುತ್ ಕಂಬಗಳು ವಾಲಿರುವುದು ನಡೆದಿದೆ.ರಸ್ತೆ ಸಂಪರ್ಕ ಕಡಿತ ಭೀತಿ:
ಎಮ್ಮೆಗುಂಡಿ ಭಾಗದ ನಿವಾಸಿಯೋರ್ವರ ಮನೆ ಮುಂಭಾಗದ ಕಿರು ಸೇತುವೆ ಕುಸಿಯುವ ಹಂತದಲ್ಲಿದ್ದು, ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಇದರೊಂದಿಗೆ ವಿದ್ಯುತ್ ಕಂಬಗಳು ಕೂಡ ಬೀಳುವ ಪರಿಸ್ಥಿತಿ ಇದ್ದು, ಸೆಸ್ಕ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸಂಭವನೀಯ ಅಪಾಯವನ್ನು ತಪ್ಪಿಸುವಂತೆ ವಾರ್ಡ್ ಸದಸ್ಯರಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ, ಕೆ.ಎಂ. ಅಲಿಕುಟ್ಟಿ ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.ದಿನದಿಂದ ದಿನಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಸಂಖ್ಯೆಯು ಬೆಳೆಯುತ್ತಿದ್ದು, ಪಂಚಾಯಿತಿ ವ್ಯಾಪ್ತಿಯು ಅಭಿವೃದ್ಧಿಗೊಳ್ಳುತ್ತಿದೆ. ಕಳೆದ 2 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಮಾರುಕಟ್ಟೆ ರಸ್ತೆಯ ಚರಂಡಿಗಳನ್ನು ಅಗಲೀಕರಣಗೊಳಿಸುವ ಮೂಲಕ ಮೋರಿ ನಿರ್ಮಿಸಿ ಹೆದ್ದಾರಿಯಲ್ಲಿ ಹರಿಯುವ ಮಳೆಯ ನೀರನ್ನು ವಿಭಾಜಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ನಿರ್ವಹಿಸಲಾಗುವುದು. ಈಗಾಗಲೇ ಯೋಜನಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
। ಪಿ.ಆರ್.ಸುನಿಲ್ ಕುಮಾರ್, ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ