ರಸ್ತೆ, ಫುಟ್‌ಪಾತ್ ಅತಿಕ್ರಮಣ ತೆರವಿಗೆ ಮುಂದಾಗಿ

| Published : Oct 26 2024, 12:56 AM IST

ಸಾರಾಂಶ

ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ಕುರಿತು ಬರುತ್ತಿರುವ ದೂರು ವಿಲೇವಾರಿ ಮಾಡಲು ಕ್ಷೀಪ್ರಗತಿ ಕಾರ್ಯಾಚರಣೆಗೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು

ಗಜೇಂದ್ರಗಡ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪುರಸಭೆ ಬದ್ಧವಾಗಿದ್ದು, ಸ್ಥಳೀಯ ರಸ್ತೆ ಹಾಗೂ ಪುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ನೊಟೀಸ್ ನೀಡುವುದರ ಜತೆಗೆ ಬಾಕಿ ಇರುವ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮುದಿಯಪ್ಪ ಮುಧೋಳ ಹೇಳಿದರು.

ಸ್ಥಳೀಯ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಸಾರ್ವಜನಿಕರ ಸಹಕಾರ ಹಾಗೂ ವಿಶ್ವಾಸದೊಂದಿಗೆ ಪಟ್ಟಣ ಸ್ವಚ್ಛ ಹಾಗೂ ಸುಂದರವಾಗಿ ನಿರ್ಮಿಸಲು ಪುರಸಭೆ ಆಡಳಿತ ಬದ್ಧವಾಗಿದೆ. ಪಟ್ಟಣದಲ್ಲಿ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ಕುರಿತು ಬರುತ್ತಿರುವ ದೂರು ವಿಲೇವಾರಿ ಮಾಡಲು ಕ್ಷೀಪ್ರಗತಿ ಕಾರ್ಯಾಚರಣೆಗೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪಟ್ಟಣದ ಮುಖ್ಯ ರಸ್ತೆ, ಫುಟ್‌ಪಾತ್ ಸೇರಿ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಅತಿಕ್ರಮಣದಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಅಧಿಕಾರಿಗಳು ಪಟ್ಟಣ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಅತಿಕ್ರಮಣ ತೆರವಿಗೆ ಮುಂದಾಗಬೇಕು ಎಂದು ಖಡಕ್ ಸೂಚನೆ ನೀಡಿದರು.

ಪಟ್ಟಣದಲ್ಲಿ ಪುರಸಭೆ ವಾಣಿಜ್ಯ ಮಳಿಗೆಗಳ ಲೀಲಾವು ಹಾಗೂ ಸಾರ್ವಜನಿಕರ ಆಸ್ತಿ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ನೀಲ ನಕ್ಷೆ ಹಾಕಿಕೊಳ್ಳಬೇಕು. ಸರ್ಕಾರ ಹಾಗೂ ತಾಲೂಕಾಡಳಿತದಿಂದ ಪಟ್ಟಣದ ಅಭಿವೃದ್ಧಿ ಅನುದಾನ ಸಕಾಲಕ್ಕೆ ಬರುತ್ತಿರುತ್ತದೆ. ಆದರೆ ಸ್ಥಳೀಯ ಸಂಪನ್ಮೂಲಕ ಕ್ರೂಢಿಕರಣವು ಸಹ ಮುಖ್ಯಾಗಿದ್ದು ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುವುದರ ಜತೆಗೆ ಸಾರ್ವಜನಿಕರು ಉತಾರ, ತೆರಿಗೆ ಭರಣೆ, ನೀರು ಪೂರೈಕೆ ಹಾಗೂ ವಿದ್ಯುತ್ ದೀಪ ಸೇರಿ ಇತರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮೂಲಕ ಪುರಸಭೆಗೆ ಅಲೆಯದಂತೆ ಕೆಲಸ ಕಾರ್ಯ ಮಾಡಿಕೊಡಬೇಕು. ಸಾರ್ವಜನಿಕರಿಂದ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ದೂರುಗಳು ಬಂದರೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಪುರಸಭೆ ಆಡಳಿತ ಮುಂದಾಗಲಿದೆ ಎಂದು ಎಚ್ಚರಿಸಿದರು.