ಮಳೆಗಾಲದಲ್ಲಿ ರೋಗ ಕಾಡುವ ಮೊದಲು ಎಚ್ಚರಿಕೆ ವಹಿಸಿ: ತಜ್ಞರ ಕಿವಿಮಾತು

| N/A | Published : Jun 14 2025, 03:44 AM IST / Updated: Jun 14 2025, 11:34 AM IST

ಮಳೆಗಾಲದಲ್ಲಿ ರೋಗ ಕಾಡುವ ಮೊದಲು ಎಚ್ಚರಿಕೆ ವಹಿಸಿ: ತಜ್ಞರ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಆರಂಭವಾಗುತ್ತಿದ್ದಂತೆ ಶ್ವಾಸಕೋಶದ ಸೋಂಕು, ಸೊಳ್ಳೆಗಳಿಂದ ಹರಡುವ ಸೋಂಕು ಹಾಗೂ ಹೊಟ್ಟೆಯ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಇವುಗಳಿಗೆ ಆಹಾರದಲ್ಲಿ ಸ್ವಚ್ಛತೆ ಇಲ್ಲದಿರುವುದು, ಸುತ್ತಮುತ್ತಲಿನ ವಾತಾವರಣದಲ್ಲಿ ಕೊಳಕು, ದೇಹದ ಶುಚಿತ್ವ ಇಲ್ಲದಿರುವುದೇ ಕಾರಣವಾಗುತ್ತದೆ.  

ಮಂಗಳೂರು : ಮಳೆಗಾಲ ಬಂದಾಗಿದೆ, ಜೊತೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಯೂ ಕಾಡತೊಡಗಿವೆ. ಡೆಂಘೀ, ಮಲೇರಿಯಾ, ಜಾಯಿಂಡೀಸ್‌ನಂತಹ ಸಮಸ್ಯೆಗಳು ನಿಂತ ಮಳೆ ನೀರು, ಸೊಳ್ಳೆಗಳ ಮೂಲಕ ದೇಹವನ್ನು ಸೇರಿ ಮಾರಕ ರೋಗಗಳಾಗಿ ಕಾಡಬಹುದು. ಹೀಗಾಗಿ ಮಳೆಗಾಲದ ಸೊಬಗನ್ನು ಅನುಭವಿಸುವುದರ ಜೊತೆಗೆ ಇಂತಹ ರೋಗಗಳಿಂದ ದೂರವಿರಲು ಮುನ್ನೆಚ್ಚರಿಕೆ ವಹಿಸಬೇಕು.

ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳು, ಕೆಲಸಗಳಿಗೆ ತೆರಳುವವರು ಬಲು ಬೇಗ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಕೆಮ್ಮು, ಶೀತ, ಜ್ವರ, ಗಂಟಲು ಕೆರೆತದಂತಹ ಸಮಸ್ಯೆ ಸುಲಭವಾಗಿ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಮಳೆ ಆರಂಭವಾಗುತ್ತಿದ್ದಂತೆ ಶ್ವಾಸಕೋಶದ ಸೋಂಕು, ಸೊಳ್ಳೆಗಳಿಂದ ಹರಡುವ ಸೋಂಕು ಹಾಗೂ ಹೊಟ್ಟೆಯ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಇವುಗಳಿಗೆ ಆಹಾರದಲ್ಲಿ ಸ್ವಚ್ಛತೆ ಇಲ್ಲದಿರುವುದು, ಸುತ್ತಮುತ್ತಲಿನ ವಾತಾವರಣದಲ್ಲಿ ಕೊಳಕು, ದೇಹದ ಶುಚಿತ್ವ ಇಲ್ಲದಿರುವುದೇ ಕಾರಣವಾಗುತ್ತದೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಕೆಲವು ಬ್ಯಾಕ್ಟೀರಿಯಾ, ಫಂಗಸ್‌ ಹಾಗೂ ವೈರಸ್‌ಗಳು ದೀರ್ಘಕಾಲದ ವರೆಗೆ ವಾತಾವರಣದಲ್ಲಿ ಇರುತ್ತವೆ. ಹೀಗಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಲ್ಲಿ ನ್ಯುಮೊನಿಯಾ, ಕಫ, ಗಂಟಲು ನೋವು, ಶೀತದಂತಹ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅಸ್ತಮಾ ಸಮಸ್ಯೆ ಹೊಂದಿರುವವರಲ್ಲಿ ಇಂತಹ ವಾತಾವರಣ ಮತ್ತಷ್ಟು ಸಮಸ್ಯೆ ಉಂಟುಮಾಡುತ್ತವೆ.

ನಿಂತ ನೀರಲ್ಲಿ ರೋಗ ಹರಡುವ ಸೊಳ್ಳೆಗಳು: ಈಡಿಎಸ್‌, ಹೆಣ್ಣು ಅನಾಫಿಲಿಸ್‌ ಸೊಳ್ಳೆಗಳು ನಿಂತ ನೀರಿನಲ್ಲಿ ವಂಶವೃದ್ಧಿಮಾಡುತ್ತವೆ. ಇವು ಡೆಂಘೀ, ಮಲೇರಿಯಾದಂತಹ ರೋಗವನ್ನು ಹರಡುತ್ತವೆ. ಮನೆಯ ಸುತ್ತಲೂ ನಿಂತ ನೀರು ಮಳೆಗಾಲದಲ್ಲಿ ರೋಗಹರಡುವ ಸ್ಥಳವಾಗಿ ಮಾರ್ಪಾಡಾಗುತ್ತವೆ. ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಡೆಂಘೀ, ಮಲೇರಿಯಾ ರೋಗಗಳು ಜೀವಕ್ಕೆ ಅಪಾಯತಂದೊಡ್ಡಬಹುದು. 

ಗ್ಯಾಸ್ಟ್ರೊಎಂಟರೈಟಿಸ್‌ ಸೋಂಕು:  ಮಳೆ ನೀರು ಸೇರಿದ ಆಹಾರ ಪದಾರ್ಥ ಸೇವನೆ, ಕಲುಷಿತ ನೀರಿನ ಸೇವನೆ ಬಲು ಬೇಗನೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆಯಲ್ಲಿ ಸೋಂಕು ಉಂಟಾಗಿ ಅಜೀರ್ಣ, ವಾಂತಿ, ಬೇಧಿ ಮುಂತಾದ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ರಸ್ತೆ ಬದಿಯ ಆಹಾರ, ಮಳೆ ನೀರಲ್ಲಿ ಬಹಳದಿನಗಳ ಕಾಲ ನೆನೆದ ಹಣ್ಣುಗಳು ಕೂಡ ಹೊಟ್ಟೆಯ ಸೋಂಕಿಗೆ ಕಾರಣವಾಗಬಹುದು. ಇನ್ನು ಮಳೆ ನೀರಲ್ಲಿ ನೆನೆದು ಬಂದ ತಕ್ಷಣ ಆಹಾರಸೇವನೆ ಮಾಡಿದ್ದಲ್ಲಿ ನಿಮ್ಮ ಕೈ, ಕಾಲುಗಳಲ್ಲಿನ ಬ್ಯಾಕ್ಟೀರಿಯಾ ಕೂಡ ಹೊಟ್ಟೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. 

ಶಾಲೆ ಮಕ್ಕಳ ಆರೈಕೆ ಹೇಗೆ?ಪುಟ್ಟ ಮಕ್ಕಳು ಮಳೆಗಾಲವನ್ನು ಸಾಕಷ್ಟು ಎಂಜಾಯ್ ಮಾಡುತ್ತಾರೆ. ಆದರೆ ಅನಾರೋಗ್ಯಕ್ಕೆ ಒಳಗಾಗುವ ಸಂದರ್ಭಗಳೂ ಹೆಚ್ಚು. ಹೀಗಾಗಿ ಪೋಷಕರು, ಶಿಕ್ಷಕರು ಮಕ್ಕಳ ಆರೋಗ್ಯದ ಮೇಲೆ ತೀವ್ರ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಶಾಲೆ ಕೂಡ ರೋಗ ಹರಡುವ ಕೇಂದ್ರವಾಗಬಹುದು. ಹೀಗಾಗಿ ಮಕ್ಕಳಿಗೆ ಶೀತ, ಜ್ವರ ಬಂದಲ್ಲಿ ಶಾಲೆಗೆ ಕಳುಹಿಸುವುದನ್ನು ಹಾಗೇ ಜನಜಂಗುಳಿ ಇರುವ ಪ್ರದೇಶಕ್ಕೆ ಕಳುಹಿಸುವುದನ್ನು ತಪ್ಪಿಸಿ. ಶಿಕ್ಷಕರು ಕೂಡ ಶಾಲೆಯಲ್ಲಿ ಮಕ್ಕಳ ಆರೋಗ್ಯ ಹದಗೆಟ್ಟರೆ ತಕ್ಷಣ ವೈದ್ಯರನ್ನು ಹಾಗೂ ಪೋಷಕರನ್ನುಸಂಪರ್ಕಿಸುವುದು ಉತ್ತಮ. ಮಕ್ಕಳಲ್ಲಿ ಆಗಾಗ್ಗೆ ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿ.

ಮಳೆಯಲ್ಲಿ ನೆನೆದ ಹಣ್ಣು ಸೇವನೆ ಉತ್ತಮವೇ?:ಈ ಸಮಯಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳನ್ನು ಸಾಕಷ್ಟು ಜನರು ಸೇವಿಸಲು ಇಷ್ಟಪಡುತ್ತಾರೆ. ಇವು ಆರೋಗ್ಯಕ್ಕೆ ಉತ್ತಮವಾದ ಅಂಶವನ್ನು ನೀಡುವ ಹಣ್ಣುಗಳೇ. ಆದರೆ ದೀರ್ಘಕಾಳ ಮಳೆಯಲ್ಲಿ ನೆನೆದು ಕೊಳೆಯುವ ಹಂತ ತಲುಪಿದ್ದರೆ ಅಥವಾ ಮಳೆ ನೀರು ಕುಡಿದು ಮೆತ್ತಗಾಗಿದ್ದಲ್ಲಿ ಅಂತಹ ಹಣ್ಣುಗಳ ಸೇವನೆಯನ್ನು ತಪ್ಪಿಸಿ. ಹಣ್ಣುಗಳು ಕೊಳೆಯುವ ಹಂತ ತಲುಪಿದ್ದಾಗ ಮಳೆ ನೀರು ಕೂಡ ಸೇರಿ ಆಹಾರ ಕಲುಷಿತಗೊಳ್ಳುತ್ತವೆ. ಇದರಿಂದ ವಾಂತಿ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ ಉಂಟಾಗಬಹುದು.

ಸ್ವಚ್ಛತೆಯೇ ರಕ್ಷಣೆ ಮರೆಯಬೇಡಿ:

 ಮಳೆಗಾಲದಲ್ಲಿ ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ನೀರಿನ ತೊಟ್ಟಿಯಲ್ಲಿನ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಿ ಹಾಗೆಯೇ ಹೂ ಕುಂಡಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿ. ಇಂತಹ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿರುತ್ತದೆ.- ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಸೊಳ್ಳೆಗಳ ಸಂಚಾರ ಹೆಚ್ಚಾಗಿರುವ ವೇಳೆ ಆದಷ್ಟು ತುಂಬು ತೋಳಿನ ದಿರಿಸು ಧರಿಸಿ, ಮಲಗುವಾಗ ಸೊಳ್ಳೆ ನಿವಾರಕ, ನೆಟ್‌ಗಳನ್ನು ಬಳಸುವುದು ಉತ್ತಮ.

 ಕಿಟಕಿಗಳಿಗೆ ಮೆಶ್‌ಗಳನ್ನು ಅಳವಡಿಸುವ ಮೂಲಕ ಮನೆಯೊಳಗೆ ಸೊಳ್ಳೆಗಳು ಬರದಂತೆ ತಡೆಯಿರಿ. ಮಳೆಗಾಲದಲ್ಲಿ ಮಕ್ಕಳು ಬಲು ಬೇಗ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ. ಹೀಗಾಗಿ ಅವರನ್ನು ಆದಷ್ಟು ಒಣ ಪ್ರದೇಶದಲ್ಲಿ ಆಡಲು ಉತ್ತೇಜಿಸಿ, ಬೆಚ್ಚನೆಯ ಬಟ್ಟೆ ಹಾಗೂ ಕಾಲು ಮತ್ತು ಕೈ ಮುಚ್ಚುವಂತಹಬಟ್ಟೆಯನ್ನು ನೀಡಿ. ಮಳೆಯಲ್ಲಿ ನೆನೆಯುವುದು, ಕಲುಷಿತ ನೀರಿನಲ್ಲಿ ಆಡುವುದು ಆರೋಗ್ಯ ಸಮಸ್ಯೆಗೆ ದಾರಿಯಾಗಬಹುದು. ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ಯುಕ್ತ ಆಹಾರಗಳನ್ನುನೀಡಿ, ಹ್ಯಾಂಡ್‌ವಾಶ್‌ ಉಪಯೋಗಿಸಿ ಕೈ ತೊಳೆಯಿಸಿ.

। ಡಾ. ಬಸವಪ್ರಭು, ಕನ್ಸಲ್ಟೆಂಟ್‌ ಇಂಟರ್ನಲ್‌ ಮೆಡಿಸಿನ್‌, ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ ಮಂಗಳೂರು

Read more Articles on