ಹೆಣ್ಣು ಮಾತೃತ್ವದ ಅದಮ್ಯ ಶಕ್ತಿಯಾಗಿದ್ದು , ಶಿಕ್ಷಣವೆಂಬ ಅಸ್ತ್ರವನ್ನು ಹೊಂದಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಶಿವಮೊಗ್ಗ: ಹೆಣ್ಣು ಮಾತೃತ್ವದ ಅದಮ್ಯ ಶಕ್ತಿಯಾಗಿದ್ದು , ಶಿಕ್ಷಣವೆಂಬ ಅಸ್ತ್ರವನ್ನು ಹೊಂದಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪದವಿ ಮತ್ತು ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಬಹಳ ದೊಡ್ಡ ಶಕ್ತಿ ಮತ್ತು ಶಸ್ತ್ರ. ಇದರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಿದ್ದು, ನೀವೆಲ್ಲಾ ಸುಶಿಕ್ಷಿತರಾಗಿ ಬದಲಾವಣೆ ತರಬೇಕು ಎಂದರು.ಡಾ.ಅಂಬೇಡ್ಕರ್ ರವರ ಧ್ಯೇಯವಾಕ್ಯಗಳಾದ ಶಿಕ್ಷಣ, ಸಂಘಟನೆ, ಹೋರಾಟ ನಮಗೆಲ್ಲ ಬಹು ಮುಖ್ಯವಾಗಿದ್ದು ಶಿಕ್ಷಣ ಪಡೆದು, ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕು. ಯಾವ ಹಕ್ಕುಗಳಿಗಾಗಿ ನಾವು ಹೋರಾಡುತ್ತೀವೋ ಅದು ಲಭಿಸುತ್ತದೆ. ನನ್ನ ತಂದೆ ನನಗೆ ಶಿಕ್ಷಣ ನೀಡದಿದ್ದರೆ ನಾನಿಂದು ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಹೆಣ್ಣುಮಕ್ಕಳೆಲ್ಲ ಶಿಕ್ಷಿತರಾಗಬೇಕು. ಒಂದು ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಪ್ರತಿ ದಿನ ಆ ಗುರಿಯ ಕನಸು ಕಾಣಬೇಕು, ಅದಕ್ಕಾಗಿ ಶ್ರಮ ಪಡಬೇಕು. ಶ್ರಮ ಇದ್ದರೆ ಮಾತ್ರ ಫಲ. ಕಷ್ಟಪಟ್ಟರೆ ಏನಾನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು. ಯುವಜನತೆಗೆ ಮೊಬೈಲ್ ಇಂದು ನಿಜವಾದ ಸವಾಲಾಗಿದೆ. ಮೊಬೈಲ್ನ ಗುಲಾಮ ನೀವಾಗಬಾರದು. ಅಗತ್ಯಕ್ಜಿಂತ ಹೆಚ್ಚು ಅದನ್ನು ಬಳಸಿದರೆ ನಿಮ್ಮ ಗುರಿ ಸಾಧಿಸಲು ಸಾಧ್ಯವಿಲ್ಲ. ಕನಿಷ್ಠ 3 ಗಂಟೆ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು. ಅರಿವು ಬದುಕು, ಅಜ್ಞಾನ ಸಾವು, ಶಿಕ್ಷಣದ ಜೊತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜನರ ಬದುಕನ್ನು ಬದಲಾಯಿಸಲು ರಾಜಕಾರಣಕ್ಕೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು, ಹೆಣ್ಣು ಮಕ್ಕಳು ರಾಜಕಾರಣಕ್ಕೆ ಬರಬೇಕು. ರಾಜಕಾರಣ ಪ್ರಗತಿಯ ಬೀಗವಾಗಿದ್ದು ಹೆಣ್ಣು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಈ ಪ್ರಗತಿ ಸಾಧ್ಯವಾಗುತ್ತದೆ. ನೀವು ಸಮಾಜದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.ವಿದ್ಯಾರ್ಥಿಗಳಾದ ನೀವು ಜಿಲ್ಲೆಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ, ಎಸ್ಪಿ, ಸಿಇಒ, ಜಿಲ್ಲೆಯ ವಿವಿಧ ಅಧಿಕಾರಿಗಳಿಗೆ ತಿಳಿಸಬೇಕು. ಸೈಬರ್ ಜಗತ್ತು ಒಂದು ಬಹಳ ದೊಡ್ಡ ಅಭದ್ರತೆ ಸೃಷ್ಟಿಸಿದೆ. ಫೇಕ್ ಅಕೌಂಟ್ ಮೂಲಕ ಹೆಣ್ಣು ಮಕ್ಕಳಿಗೆ ದಾಳ ಹಾಕಿ ಬಲೆಗೆ ಸೆಳೆದು ಕೂಪಕ್ಕೆ ತಳ್ಳಲಾಗುತ್ತಿದೆ. ಸೈಬರ್ ಕ್ರೈಂ ಜಗತ್ತು ವಿಚಿತ್ರವಾಗಿದ್ದು ಬಹಳ ಜಾಗೃತರಾಗಿರಬೇಕು ಎಂದು ತಿಳಿಸಿದರು.ಸೈಬರ್ ಕ್ರೈಮ್ಗೆ ಸಂಬಂಧಿಸಿದಂತೆ ಬ್ಲಾಕ್ಮೇಲ್ ಇತರೆ ಸಮಸ್ಯೆಗಳಿದ್ದರೆ ದೂರು ನೀಡಬೇಕು. ಧೈರ್ಯವಾಗಿ ಎದುರಿಸಬೇಕು. ಜೀವ ಕಳೆದುಕೊಳ್ಳಬಾರದು. ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಅಥವಾ 112 ಗೆ ಕರೆ ಮಾಡಬೇಕು. ಈಗಲೇ ಎಲ್ಲರೂ ಸುರಕ್ಷಾ ಆಪ್ಡೌನ್ ಲೋಡ್ ಮಾಡಿಕೊಳ್ಳಬೇಕು. ವಿದ್ಯಾರ್ಥಿನಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.
ಈ ವೇಳೆ ವಿದ್ಯಾರ್ಥಿನಿಯರೊಂದಿಗೆ ಪ್ರೇರಣಾತ್ಮಕವಾಗಿ ಸಂವಾದ ನಡೆಸಿದರು. ಸಂವಾದದ ವೇಳೆ ವಿದ್ಯಾರ್ಥಿನಿಯರು ಸೈಬರ್ ದೂರಿನ ಬಗ್ಗೆ, ವಸತಿ ನಿಲಯದಲ್ಲಿ ಸೀಟ್ ಸಿಗದಿರುವ ಬಗ್ಗೆ ಹಾಗೂ ವಿದ್ಯಾರ್ಥಿ ವೇತನ ಬಾರದಿರುವ ಬಗ್ಗೆ ದೂರಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ಯಶೋಧ, ಉಪನ್ಯಾಸಕ ಚಂದ್ರಮೋಹನ್, ಇತರೆ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.