ಸಾರಾಂಶ
ಹೊಳೆಹೊನ್ನೂರು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಆಗಾಗ ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ತಂದೊಡ್ಡಿವೆ.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರ್ನಾಲ್ಕು ಕರಡಿಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿ ಜೀವನ ನಡೆಸುವ ಸಂದರ್ಭ ಎದುರಾಗಿದೆ.ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ದಾಸರಕಲ್ಲಹಳ್ಳಿ, ತಿಮ್ಲಾಪುರ, ತಿಮ್ಲಾಪುರ ಕ್ಯಾಂಪ್, ಜಂಬರಘಟ್ಟೆ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಾಣಿಸುತ್ತಿದ್ದು, ಕೆಲ ದಿನಗಳ ಹಿಂದೆ ಎಮ್ಮೆಹಟ್ಟಿ ಆನಂದಪ್ಪ ಎಂಬುವರಿಗೆ ಕಚ್ಚಿದ್ದು, ಈಗ ಅಡಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜಮೀನುಗಳಿಗೆ ಹೋಗುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ಅಗಸನಹಳ್ಳಿ ಬಸವರಾಜ್ ಎಂಬುವರು ಹಸುಗಳಿಗೆ ಹುಲ್ಲು ಕುಯ್ಯಲು ಹೋದಾಗ ಕರಡಿ ದಾಳಿ ನಡೆಸಲು ಮುಂದಾಗಿದ್ದು, ತಕ್ಷಣವೇ ಅವರು ಎದ್ದು ಬಿದ್ದು ಓಡಿ ಬಂದಿದ್ದರಿಂದ ಯಾವುದೇ ಹಾನಿಯಾಗಿಲ್ಲ. ಅಲ್ಲದೇ ಸೋಮವಾರ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ರಾಜಪ್ಪ ಎಂಬವರ ಮನೆಯ ಹತ್ತಿರ ಕಾಣಿಸಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬರೂ ಹಗಲು ಹೊತ್ತಿನಲ್ಲೇ ಜಮೀನಿಗೆ ತೆರಳುವುದಕ್ಕೆ ಹಿಂದೇಟು ಹಾಕುವುದದಲ್ಲದೆ ಭಯ ಭೀತರಾಗಿದ್ದಾರೆ. ರಾತ್ರಿ ವೇಳೆ ಯಲ್ಲಿ ಕರಡಿ ಗ್ರಾಮದೊಳಗೆ ಪ್ರವೇಶ ಮಾಡುತ್ತಿದ್ದು, ಅಡಕೆ ಮನೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಗ್ರಾಮದಲ್ಲಿನ ಕಳೆದು ಮೂರು ದಿನಗಳಿಂದ ಯುವಕರು ರಾತ್ರಿ ಪಾಳಿಯಲ್ಲಿ ಕಾಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಗ್ರಾಮಸ್ಥರು ಅನೇಕ ಬಾರಿ ಕರೆ ಮಾಡಿದರೂ ಗ್ರಾಮದೊಳಗೆ ಯಾವುದೇ ಬೋನ್ ಇಟ್ಟಿಲ್ಲ ಎಂಬುದು ಅಗಸನಹಳ್ಳಿ ಗ್ರಾಮಸ್ಥರ ಆರೋಪವಾಗಿದೆ.ಇನ್ನು, ವಡ್ಡರಹಟ್ಟಿ ಚೌಡಮ್ಮ ದೇವಸ್ಥಾನ ಬಳಿ ಬೋನ್ವೊಂದನ್ನು ಇಟ್ಟಿದ್ದು, ಕಾಡು ಕಡಿಮೆಯಾಗಿದ್ದರಿಂದ ಅಲ್ಲಿ ಪ್ರಾಣಿಗಳು ಗ್ರಾಮದೊಳಗೆ ನುಗ್ಗುತ್ತಿವೆ, ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕರಡಿಯನ್ನು ಯಾವುದರೂ ಮನೆಯಲ್ಲಿ ಅಥವಾ ಅಡಕೆ ಮನೆಯಲ್ಲಿ ಕೂಡಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಮಾವಿನಕಟ್ಟೆ ಆರ್.ಎಫ್.ಓ.ಜಗದೀಶ್ ಹೇಳಿದರು.