ಸಾರಾಂಶ
ಗಜೇಂದ್ರಗಡ: ದೇಶದ ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರ್ಣಗೊಂಡ ಹಿನ್ನೆಲೆ ರಾಜ್ಯ ಸರ್ಕಾರ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜ.೨೬ರಿಂದ ಆರಂಭವಾಗಿರುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ಪಟ್ಟಣಕ್ಕೆ ಆಗಮಿಸಿತು.ತಾಲೂಕಿನ ಕುಂಟೋಜಿ ಗ್ರಾಮದಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವು ಸ್ಥಳೀಯ ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಸಾಗಿದ ಜಾಗೃತಿ ಜಾಥಾ ಈದ್ಗಾ ಮೈದಾನ, ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ ತಲುಪಿ ಮರಳಿ ಜೋಡು ರಸ್ತೆ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತ ತಲುಪಿತು. ಬಳಿಕ ಇಲ್ಲಿನ ಕಾಲಕಾಲೇಶ್ವರ ವೃತ್ತದ ಬಳಿಯ ಜೋಡು ರಸ್ತೆಯಲ್ಲಿ ತಾಲೂಕಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮಾತನಾಡಿ, ವಿಶ್ವದ ದೀರ್ಘ ಸಂವಿಧಾನವು ನಮ್ಮದು, ನಮ್ಮ ಸಂವಿಧಾನದ ಸೌಂದರ್ಯಯವೇ ಸಮಾನತೆ ಎಂದರು.
ಮುಖಂಡ ಶರಣು ಪೂಜಾರ ಮಾತನಾಡಿ, ದೇಶವು ಆಂಗ್ಲರ ಆಡಳಿತದಿಂದ ಮುಕ್ತವಾದ ಬಳಿಕ ದೇಶದ ನಿವಾಸಿಗಳು ಸಮಾನರು ಎಂಬ ಸಂದೇಶವನ್ನು ನೀಡಿದ ಸಂವಿಧಾನ ನಮ್ಮೆಲ್ಲರ ಶಕ್ತಿಯಾಗಿದೆ. ಅಂತಹ ಶಕ್ತಿಯನ್ನು ಸುಟ್ಟು ಹಾಕುವ ಕೃತ್ಯ ಹಾಗೂ ಸಂವಿಧಾನ ಬದಲಾವಣೆಗೆ ನಾವು ಬಂದಿರೋದು ಎಂಬ ಹೇಳಿಕೆಗಳು ಅತ್ಯಂತ ಅಪಾಯಕಾರಿ. ಹೀಗಾಗಿ ಸಂವಿಧಾನ ಅಪಾಯದಲ್ಲಿದೆ ಎನ್ನುವ ದೆಸೆಯಲ್ಲಿ ಸರ್ಕಾರವು ಸಂವಿಧಾನ ಜಾಗೃತಿಯನ್ನು ಹಮ್ಮಿಕೊಂಡಿದೆ. ಹೀಗಾಗಿ ನಮ್ಮ ಶಕ್ತಿಯಾಗಿರುವ ಸಂವಿಧಾನವನ್ನು ಕಸಿಯುವ ಕೆಲಸಕ್ಕೆ ಕೈ ಹಾಕುವವರ ವಿರುದ್ಧ ನಾವು ಎಚ್ಚರಿಕೆಯಿಂದ ಇದ್ದು, ಡಾ.ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಂವಿಧಾನ ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿದರು. ವೀರಪ್ಪ ಜೂಚನಿ ಉಪನ್ಯಾಸ ನೀಡಿದರು.ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಕನಕಪ್ಪ ಅರಳಿಗಿಡದ, ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸದಸ್ಯರಾದ ವೆಂಕಟೇಶ ಮುದಗಲ್, ರಾಜು ಸಾಂಗ್ಲೀಕರ, ರೂಪೇಶ ರಾಠೋಡ, ಮುಖಂಡರಾದ ಬಸವರಾಜ ಬಂಕದ, ಶ್ರೀಧರ ಬಿದರಳ್ಳಿ, ಯಲ್ಲಪ್ಪ ಬಂಕದ, ದುರಗಪ್ಪ ಮುಧೋಳ, ರವಿ ಗಡೇದವರ, ಸಿದ್ದಪ್ಪ ಚೋಳಿನ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ವಿವಿಧ ಶಾಲೆಯ ಶಿಕ್ಷಕರು, ದಲಿತ ಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಸೇರಿ ಇತರರು ಭಾಗವಹಿಸಿದ್ದರು.