ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದು ನೇಕಾರ ಸಮುದಾಯ ಸೇರಿದಂತೆ ಹಿಂದುಳಿದ ವರ್ಗದ ಜನತೆ ಆರ್ಥಿಕ ಸಬಲತೆ ಹೊಂದಬೇಕೆಂದು ಡಿ.ದೇವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಹೇಳಿದರು.ರಾಮಪುರ ಶ್ರೀನೀಲಕಂಠೇಶ್ವರ ಮಠದಲ್ಲಿ ಬುಧವಾರ ನಡೆದ ಡಿ.ದೇವರಾಜ ಅರಸು ಸ್ಮರಣೋತ್ಸವ ಮತ್ತು ರಾಜ್ಯ ನೇಕಾರ ಸೇವಾ ಸಂಘದ ವಾರ್ಷಿಕೋತ್ಸವದ ನಿಮಿತ್ತ ನಿಗಮದ ಸೌಲಭ್ಯಗಳ ಕುರಿತಾದ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಯೋಜನೆಗಳು ಅರ್ಹರಿಗೆ ದೊರೆಯುವಂತೆ ನಿಸ್ವಾರ್ಥ ಭಾವದಿಂದ ಶ್ರಮಿಸಿದರೆ ಹಿಂದುಳಿದ, ಬಡವರು ಮತ್ತು ಶೋಷಿತ ಸಮುದಾಯದ ಎಲ್ಲರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆಂದರು.ಅತಿಥಿ ಪತ್ರಕರ್ತ ಮಲ್ಲಿಕಾರ್ಜುನ ತುಂಗಳ ಮಾತನಾಡಿ, ನೇಕಾರಿಕೆ ಅವಳಿ ನಗರದ ಪ್ರಧಾನ ಉದ್ಯೋಗವಾಗಿದೆ. ನೇಕಾರಿಕೆಯಲ್ಲಿ ಹೊಸ ಅವಿಷ್ಕಾರ ಮತ್ತು ಕೌಶಲ್ಯಯುತ ನೇಯ್ಗೆ ರೂಢಿಸಿಕೊಂಡು ನಮ್ಮ ಭಾಗದ ನೇಕಾರರು ಉದ್ಯಮಕ್ಕೆ ಹೊಸತನ ತುಂಬಬೇಕು. ಯಾರೂ ಉದ್ಯೋಗವಿಲ್ಲದೇ ಬಳಲಬಾರದೆಂಬ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಧನಾತ್ಮಕವಾಗಿ ಬಳಸಿಕೊಂಡು ಪ್ರಗತಿ ಹೊಂದಬೇಕೆಂದರು.
ಪ್ರಾಸ್ತಾವಿಕ ಮಾತುಗಳಾಡಿದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರೆಯಲು ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಸಂಗಪ್ಪ ಜಮಖಂಡಿ, ಶ್ರೀಶೈಲ ದಬಾಡಿ, ಬಸವಪ್ರಭು ಹಟ್ಟಿ, ವಿವೇಕಾನಂದ ಹುಳ್ಯಾಳ, ಶಿವಾನಂದ ಮಹಾಬಲಶೆಟ್ಟಿ, ದಾನಪ್ಪ ಹುಲಜತ್ತಿ, ಅರ್ಜುನ ಹಲಗಿಗೌಡರ ವೇದಿಕೆಯಲ್ಲಿದ್ದರು. ಸದಾಶಿವ ಬರಗಿ, ಓಂಪ್ರಕಾಶ ಬಾಗೇವಾಡಿ, ಸಂತೋಷ ಮಾಚಕನೂರ, ಕಾಡು ಕೊಕಟನೂರ, ಗಂಗಪ್ಪ ಒಂಟಗೋಡಿ, ಲಕ್ಷ್ಮಣ ಡೋನೇವಾಡಿ, ಲಕ್ಕಪ್ಪ ಪವಾರ, ರಾಮಣ್ಣಾ ಕುಲಗೋಡ, ಡಿ.ದೇವರಾಜ ಅರಸು ನಿಗಮದ ಅಧಿಕಾರಿಗಳಾದ ಮಲ್ಲೇಶ ಬಿರಾದಾರ, ಮಲ್ಲೇಶ ಹಡಪದ ಸೇರಿದಂತೆ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ, ತೇರದಾಳ, ಮಹಾಲಿಂಗಪುರ, ಜಗದಾಳ, ಆಸಂಗಿಯ ನೂರಾರು ನೇಕಾರರಿದ್ದರು. ರಾಜೇಂದ್ರ ಮಿರ್ಜಿ ಸ್ವಾಗತಿಸಿದರು. ಸಂಗಪ್ಪ ಉದಗಟ್ಟಿ ನಿರೂಪಿಸಿದರು.