ಸಾರಾಂಶ
ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರು ಸೋಮವಾರ ನಗರದ ಭಾರತ್ ಬೀಡಿ ಕಂಪೆನಿ ಮುಂದೆ ಹಕ್ಕೊತ್ತಾಯ ಚಳವಳಿ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಬಾಕಿ ಇರುವ ದಿನಗೂಲಿ ಮತ್ತು ತುಟ್ಟಿಭತ್ಯೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರು ಸೋಮವಾರ ನಗರದ ಭಾರತ್ ಬೀಡಿ ಕಂಪೆನಿ ಮುಂದೆ ಹಕ್ಕೊತ್ತಾಯ ಚಳುವಳಿ ಮಾಡಿದರು.ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಈ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ಉಡುಪಿಯಲ್ಲಿ ನೂರಾರು ಮಂದಿ ಬೀಡಿ ಕಾರ್ಮಿಕರು 2018 ರಿಂದ 2024 ವರೆಗೆ ಬಾಕಿ ಇರುವ ಕನಿಷ್ಠ ಕೂಲಿ 40 ರು. ಮತ್ತು 2024ರ ಅದಿಸೂಚಿತ ಕನಿಷ್ಟ ವೇತನ ಮತ್ತು ಬಾಕಿ ತುಟ್ಟಿಭತ್ಯೆ ಈ ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಬೀಡಿ ಸಂಘದ ಕೋಶಾಧಿಕಾರಿ ವಿ. ಶೇಖರ್, ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ಒಡೆರಹೋಬಳಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಪ್ರಧಾನವಾಗಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದರು.ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಮೋಹನ್, ಬೀಡಿ ಫೆಡರೇಶನ್ ಮುಂಖಡರಾದ ಬಲ್ಕೀಸ್ ಭಾನು, ನಳಿನಿ ಎಸ್., ಗಿರಿಜ, ಶಶಿಕಲಾ, ಮಮತಾ ಮತ್ತಿತರರಿದ್ದರು. ಬೀಡಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತಿಸಿ, ನಿರೂಪಿಸಿದರು, ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ವಂದಿಸಿದರು.