ಸಾರಾಂಶ
ಕನ್ನಡಪ್ರಭ ವಾರ್ತೆ, ಬೀರೂರು
ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವ ಶೋಭಕೃತ ಸಂವತ್ಸರ ಉತ್ತರಾಯಣ ಆರ್ದ್ರಾ ನಕ್ಷತ್ರದ ಮಂಗಳವಾರ ಅಪರಾಹ್ನ 2.45ಕ್ಕೆ ಶ್ರದ್ಧಾಭಕ್ತಿ, ಸಡಗರ ಹಾಗೂ ವೈಭವದಿಂದ ಜರುಗಿತು.ಭಾನುವಾರದಿಂದಲೇ ಅಂತರಘಟ್ಟ ಅಮ್ಮನಿಗೆ ನಿತ್ಯ ಶ್ರೀಮದ್ಭಗವತ್ ಪೂಜಾಕೈಂಕರ್ಯಗಳು ನಡೆದವು. ಸಂಜೆ ದ್ವಜಾ ರೋಹಣೆ, ತವರು ಮನೆಯಲ್ಲಿ ಕಂಕಣಧಾರಣೆ ಸೇವೆ ಸಲ್ಲಿಸಿ, ಸೋಮವಾರ ಗಣಂಗಳ ಸೇವೆ, ರಾತ್ರಿ ದುಗ್ಗಳ ಸೇವೆ ಹಾಗು ಬ್ರಹ್ಮರಥೋರೋಹಣ ನಡೆಯಿತು.
ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ಬೇವಿನಸೇವೆ ಉತ್ಸವ ನಡೆದು ಅಪರಾಹ್ನ ಪುಷ್ಪಲಾಂಕೃತ ರಥದಲ್ಲಿ ಶ್ರೀಅಂತರ ಘಟ್ಟಮ್ಮದೇವಿಯನ್ನು ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜಿಸಲಾಯಿತು. ನಂತರ ರಥವನ್ನು ಮಂಗಳವಾದ್ಯ, ವೇದಘೋಷ ಮತ್ತು ಸೋಮನ ಕುಣಿತದೊಂದಿಗೆ ಹಳೇಪೇಟೆ ಆಂಜನೇಯ ದೇವಾಲಯದವರೆಗೆ ಎಳೆದು ತರಲಾಯಿತು.ಹಿಂದೆಯೇ ಶೃಂಗಾರದೊದಿಗೆ ಸಾಗುತ್ತಿದ್ದ 50ಕ್ಕೂ ಹೆಚ್ಚಿನ ಜೋಡೆತ್ತುಗಳ ಪಾನಕದ ಬಂಡಿಗಳ ಮೆರವಣಿಗೆ ಅಮ್ಮನವರ ರಥ ಓರೆಯಾಗಿ ಸ್ಥಗಿತಗೊಂಡ ನಂತರ ಪಾನಕದ ಬಂಡಿಗಳ ಓಟ ಸಾಗಿ ಮಹಾನವಮಿ ಬಯಲಿನಲ್ಲಿ ನೆರೆದಿದ್ದ ಭಕ್ತ ವೃಂದಕ್ಕೆ ಪಾನಕ ವಿತರಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆ ಜನಸಾಗರ ರಥದ ಮೇಲೆ ಮೆಣಸು ಮತ್ತು ಬಾಳೆ ಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಭಕ್ತಿಹರಕೆ ಸಮರ್ಪಿಸಿದರು. ಬಳಿಕ ರಥ ಹಳೆಪೇಟೆಯಿಂದಾ ಶಿವಾಜಿ ನಗರದ ಆಲದಮರದವರೆಗೂ ಸಾಗಿಸಿ ವಾಪಸು ದೇವಾಲಯಕ್ಕೆ ಕರೆತರಲಾಯಿತು. ಪಾನಕದ ಗಾಡಿಯನ್ನು ಹರಕೆ ಹೊತ್ತವರು ಹರಕೆ ತೀರಿಸಲು ಶ್ರಮವಹಿಸಿ ಬಂಡಿ ಓಡಿಸುತ್ತಿದ್ದರೆ ಇತ್ತ ನೋಡಲು ಬಂದಿದ್ದ ಯುವಕರು ಅತಿ ಉತ್ಸಾಹದಿಂದ ಕೈಯಲ್ಲಿ ಬಾಳೆದಿಂಡು, ಚಾಟಿಕೋಲು ಮತ್ತಿತರ ವಸ್ತುಗಳಿಂದ ವೇಗವಾಗಿ ಬರುತ್ತಿದ್ದ ಗಾಡಿ ಎತ್ತುಗಳಿಗೆ ಬೆದರಿಸುವ ಪರಿಣಾಮ ಗಾಡಿ ಮಾಲೀಕನಿಗೆ ಎತ್ತುಗಳ ಹತೋಟಿ ತಪ್ಪಿ ಅಹಿತಕರ ಘಟನೆಗಳಿಗೆ ಕಾರಣ ವಾಗುತ್ತದೆ ಎಂದು ಸಾರ್ವಜನಿಕರು ಪೋಲಿಸರಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಜಾತ್ರೆ ವೇಳೆ ಇನ್ನು ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಪಡ್ಡೆಹುಡುಗರನ್ನು ನಿಯಂತ್ರಿಸಿದರೆ ಯಾವುದೆ ಅನಾಹುತ ಸಂಬವಿಸುವುದಿಲ್ಲ ಎಂದು ಇಲಾಖೆಗೆ ಮನವಿ ಮಾಡಿದ್ದಾರೆ.
ಬುಧವಾರ ಅಮ್ಮನವರಿಗೆ ಓಕುಳಿ ಉತ್ಸವ, ಸಂಜೆ ಪುಷ್ಪಮಂಟಪದಲ್ಲಿ ಶ್ರೀಅಮ್ಮನವರನ್ನು ಊರಿನ ರಾಜಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಉತ್ಸವ ನಡೆಸಲಾಗುವುದು. ರಥೋತ್ಸವದಲ್ಲಿ ನಡೆದ ಈ ಸಂದರ್ಭದಲ್ಲಿ ದೇವಸ್ಥಾನದ ಗುಡಿಕಟ್ಟಿನ ಗೌಡರು, ಪಟ್ಟಣದ ಹಿರಿಯ ಮುಖಂಡರು ಇದ್ದರು.ವಿಶೇಷ ಪೂಜೆ ಸಲ್ಲಿಸಿದ ಶಾಸಕ ಕೆ.ಎಸ್.ಆನಂದ್:
ಕಳೆದ ಬಾರಿ ಇದೇ ಅಮ್ಮನ ಹಬ್ಬದ ಜಾತ್ರೆಯಲ್ಲಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಅಭಿಮಾನಿಗಳ ಒತ್ತಡದಿಂದ ಜಾತ್ರೆಗೆ ಆಗಮಿಸಿದ್ದೆ. ಈ ಬಾರಿ ಅಂತರಘಟ್ಟಮ್ಮ ಶಾಸಕನನ್ನಾಗಿ ಆಯ್ಕೆ ಮಾಡಿ ಕರೆಸಿಕೊಂಡಿದ್ದಾಳೆ. ಬರಗಾಲದಿಂದ ತತ್ತರಿಸುತ್ತಿರುವ ಕಡೂರು ತಾಲೂಕಿನ ಜನತೆಗೆ ಉತ್ತಮ ಮಳೆ ಬೆಳೆ ಹರಿಸಿ , ಉತ್ತಮ ಬೆಳೆ ಜೊತೆ ಸಮೃದ್ಧಿ ನೀಡುವಂತೆ ಬೇಡಿಕೊಂಡು ಎಲ್ಲರಂತೆ ಸಾಮಾನ್ಯರಾಗಿ ಜಾತ್ರೆಯಲ್ಲಿ ಬೆರೆತು ಹಬ್ಬದ ಸವಿ ಸವಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಕೀರ್ತಿ ಗಾರ್ಮೆಂಟ್ಸ್ ಯತೀಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ವೃತ್ತ ನಿರೀಕ್ಷಕ ಶ್ರೀಕಾಂತ್ ಮತ್ತು ಪಿಎಸ್ ಐ ಸಚಿತ್ ಸೂಕ್ತ ಬಂದೋಬಸ್ತ್ ವಹಿಸಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.