ಐಪಿಎಸ್‌ ಅಧಿಕಾರಿ ಗದ್ದೆಯಲ್ಲಿ ರಾಶಿ ರಾಶಿ ಮರಳು ಸಂಗ್ರಹ! ಗೃಹ ಸಚಿವರಿಗೆ ವಕೀಲರ ದೂರು

| N/A | Published : Feb 07 2025, 10:24 AM IST

mustard from soil

ಸಾರಾಂಶ

ಬೆಳಗಾವಿಯ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ, ಐಪಿಎಸ್‌ ಅಧಿಕಾರಿ ರವೀಂದ್ರ ಗದಾಡಿ ಅವರ ತಂದೆ ಹೆಸರಿನಲ್ಲಿರುವ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಬಳಿಯ ಗದ್ದೆಯಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹ ಪತ್ತೆಯಾಗಿದೆ.

ಬೆಳಗಾವಿ : ಬೆಳಗಾವಿಯ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ, ಐಪಿಎಸ್‌ ಅಧಿಕಾರಿ ರವೀಂದ್ರ ಗದಾಡಿ ಅವರ ತಂದೆ ಹೆಸರಿನಲ್ಲಿರುವ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಬಳಿಯ ಗದ್ದೆಯಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹ ಪತ್ತೆಯಾಗಿದೆ. ಈ ಕುರಿತು ಕ್ರಮ ವಹಿಸುವಂತೆ ಕಳೆದ ಜ.31ರಂದು ಐಗಳಿ ಗ್ರಾಮದ ವಕೀಲರಾದ ವಿನೋದ್‌ ಚಕ್ರವರ್ತಿ, ಸುನೀಲ್‌ ಜುಂಜರವಾಡ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರವೀಂದ್ರ ಅವರ ತಂದೆಗೆ ಸೇರಿದ ಸ.ನಂ.215ರಲ್ಲಿ 1.5 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದಾರೆ. ಈ ಕುರಿತಾಗಿ ಅಥಣಿ ತಾಲೂಕು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಅಥಣಿ ತಹಸೀಲ್ದಾರ್‌ ಮತ್ತು ಐಗಳಿ ಪಿಎಸ್‌ಐಗೆ ವಿಡಿಯೋ ಸಹಿತ ದೂರು ಸಲ್ಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಆರ್‌ಐ ಸ್ಥಳ ಮಹಜರು ಮಾಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿನೋದ್‌ ಚಕ್ರವರ್ತಿ, ಸುನೀಲ್‌ ಜುಂಜರವಾಡ ಗೃಹ ಸಚಿವರಿಗೆ ಮಾಡಿರುವ ಮನವಿಯಲ್ಲಿ ಕೋರಿದ್ದಾರೆ.

ಮರಳು ಜಪ್ತಿ ಮಾಡಿ ನೋಟಿಸ್‌ ಜಾರಿ:

ಗೃಹ ಸಚಿವರಿಗೆ ದೂರು ನೀಡುವ ಮೊದಲು ವಿನೋದ್‌ ಮತ್ತು ಸುನೀಲ್‌ ಮನವಿ ಮೇಲೆ ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಕಳೆದ ಜ.27ರಂದು ರವೀಂದ್ರ ಗದಾಡಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಈ ನೋಟಿಸ್‌ನಲ್ಲಿ ಅಥಣಿ ತಹಸೀಲ್ದಾರ್‌ ಸೂಚನೆ ಮೇರೆಗೆ ಜ.25ರಂದು ತೇಲಸಂಗ ರಾಜಸ್ವ ನಿರೀಕ್ಷಕರು, ಐಗಳಿ ಆಡಳಿತಾಧಿಕಾರಿ ಮತ್ತು ಪಂಚಾಯತಿ ಕಾರ್ಯದರ್ಶಿಗಳು ಸ.ನಂ.215/1+2/3 ಕಾಶಪ್ಪ ಚನ್ನಬಸಪ್ಪ ಗದಾಡಿ ಅವರಿಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ 210 ಬ್ರಾಸ್‌ನಷ್ಟು ಮರಳು ದಾಸ್ತಾನು ಮಾಡಿದ್ದು ಕಂಡುಬಂದಿದೆ. ಮರಳನ್ನು ಜಪ್ತಿ ಮಾಡಿದ್ದಲ್ಲದೆ, ಕಾಶಪ್ಪ ಚನ್ನಬಸಪ್ಪ ಗದಾಡಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಮರಳನ್ನು ಉಪಯೋಗಿಸದಂತೆ ಹೇಳಿದ್ದಾರೆ. ಮರಳಿಗೆ ಸಂಬಂಧಿಸಿದ ದಾಖಲೆ ನೀಡಬೇಕು. ತಪ್ಪಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅಧಿಕೃತವಾಗಿಯೇ ಮರಳು ಸಂಗ್ರಹಿಸಲಾಗಿದೆ: ಗದಾಡಿ

ಅಥಣಿ ತಾಲೂಕಿನ ಐಗಳಿ ಗ್ರಾಮದ ಬಳಿ ನಮ್ಮ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಅಧಿಕೃತವಾಗಿಯೇ ಮರಳು ಸಂಗ್ರಹಿಸಲಾಗಿದೆ ಎಂದು ಜಾರಿ ಎಸ್‌ಪಿ ರವೀಂದ್ರ ಗದಾಡಿ ಸ್ಪಷ್ಟಪಡಿಸಿದ್ದಾರೆ.

ನನ್ನ ಹೆಸರು ಬಳಸಿಕೊಂಡು ವಿನೋದ ಚಕ್ರವರ್ತಿ ಮತ್ತು ಸುನಿಲ್ ಜುಂಜರವಾಡ ಎಂಬುವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು.‌ ನಮ್ಮ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಅಧಿಕೃತವಾಗಿಯೇ ಮರಳು ಸಂಗ್ರಹಿಸಲಾಗಿದೆ. ಅದಕ್ಕೆ ಸಂಬಂಧಿಸಿದ ರಸೀದಿಗಳು ಇವೆ. ಜಮೀನು ನನ್ನ ಹೆಸರಿನಲ್ಲಿ ಇಲ್ಲದಿದ್ದರೂ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.