ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಪಶ್ಚಿಮ ಬಂಗಾಳ ಗಡಿಯಲ್ಲಿ (ಕೋಲ್ಕತಾ) ಬಿಎಸ್ಎಫ್ ೧೪೫ನೇ ಬೆಟಾಲಿಯನ್ ನಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ಸುಲೇಮಾನ್ ಬೀದಿಯ ನಿವಾಸಿ ಕೆ. ರಾಮಕೃಷ್ಣ (43) ಅವರು ನಿಧನರಾಗಿದ್ದು, ಮಂಗಳವಾರ ನಗರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.ಬಿಎಸ್ಎಫ್ ೧೪೫ನೇ ಬಟಾಲಿಯನ್ನಲ್ಲಿ ಕೆ. ರಾಮಕೃಷ್ಣ ಅವರು ಕಳೆದ ೨೩ ವರ್ಷಗಳಿಂದ ಸೇವೆಯಲ್ಲಿದ್ದರು. ಮೇ ೧೨ರಂದು ಕೆಲಸ ಮುಗಿಸಿ ಕ್ಯಾಂಪ್ಗೆ ಬಂದ ಬಳಿಕ ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮೃತ ಯೋಧ ರಾಮಕೃಷ್ಣರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಮಂಗಳವಾರ ಯೋಧ ರಾಮಕೃಷ್ಣರ ಅವರ ಪಾರ್ಥಿವ ಶರೀರ ಬಳ್ಳಾರಿಗೆ ಆಗಮಿಸಿತು. ಬಳಿಕ ನಗರದಲ್ಲಿ ಮೆರವಣಿಗೆ ನಡೆಸಿ, ಮನೆಗೆ ತರಲಾಯಿತು. ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಸುಲೇಮಾನ್ ಬೀದಿ ತಲುಪಿತು. ಯೋಧನ ಪಾರ್ಥಿವ ಶರೀರದ ಪೆಟ್ಟಿಗೆಗೆ ರಾಷ್ಟ್ರಧ್ವಜ ಹಾಕಲಾಗಿತ್ತು. ಬಿಎಸ್ಎಫ್ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿ ಮೃತಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಎಡಿಸಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ತಹಸೀಲ್ದಾರ್ ಗುರುರಾಜ್ ಸೇರಿದಂತೆ ರೈತ ಮುಖಂಡರು ಇತರರಿದ್ದರು.ಹೃದಯಾಘಾತದಿಂದ ನರೇಗಾ ಕೂಲಿ ಕಾರ್ಮಿಕ ಸಾವು
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿತಾಲೂಕಿನ ನೆಲ್ಕುದ್ರಿ-2 ಗ್ರಾಮದ ನರೇಗಾ ಕೂಲಿಕಾರ್ಮಿಕ ಕಡ್ಲಿ ರಾಘವೇಂದ್ರ(44) ಮಾಲವಿ ಜಲಾಶಯದಲ್ಲಿ ಹೂಳು ಎತ್ತುವ ಸಂದರ್ಭದಲ್ಲಿ ಹೃದಯಾಘಾತವಾಗಿ ಸ್ಥಳದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ಮಾಲವಿ ಜಲಾಶಯದ ಪ್ರದೇಶದಲ್ಲಿ ಹೂಳು ಎತ್ತುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಉದ್ಯೋಗ ಖಾತ್ರಿ ಕೂಲಿಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟಿರುವ ಘಟನೆಗಳು ಹೆಚ್ಚು ಸಂಭವಿಸಿವೆ. ಬಿಸಿಲಿನ ಪ್ರಕರತೆ ಹೆಚ್ಚು ಇರುವುದರಿಂದ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರಪ್ಪ, ನರೇಗಾ ಸಹಾಯಕ ನಿರ್ದೇಶಕ ರಮೇಶ ಮಹಲಿಂಗಪುರ, ಪಿಡಿಒ ರೇವಣಸಿದ್ದಪ್ಪ ಭೇಟಿ ನೀಡಿ ರಾಘವೇಂದ್ರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರಕಾರದಿಂದ ಬರುವ ಪರಿಹಾರದ ಮೊತ್ತವನ್ನು ಕೂಡಲೇ ನೀಡಲಾಗುವುದು ಎಂದು ತಿಳಿಸಿದರು.ಕೂಲಿಕಾರ್ಮಿಕರು ಬೆಳಗ್ಗೆ ಉಪಾಹಾರ ಸೇವಿಸದೆ ಹೆಚ್ಚು ತ್ರಾಸದಾಯಕ ಕೆಲಸ ಮಾಡಿದರೆ ಹೃದಯಾಘಾತ ಸಂಭವಿಸುತ್ತದೆ. ರಾತ್ರಿ ತಡವಾಗಿ ಮಲಗಿ ಬೇಗ ಎದ್ದು ಕೆಲಸ ಮಾಡಿದಾಗ, ಲವಣಾಂಶದ ಕೊರತೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗುತ್ತದೆ. ಕೂಲಿಕಾರ್ಮಿಕರು ಕೆಲಸ ಮಾಡುವ ಮುಂಚೆ ಆಹಾರ ಸೇವಿಸಿ, ಆಗಾಗ ನೀರು ಕುಡಿಯುತ್ತ ನೆರಳಿನ ಆಸರೆ ಪಡೆದು ಕೆಲಸ ಮಾಡಬೇಕು ಎನ್ನುತ್ತಾರೆ ಹಗರಿಬೊಮ್ಮನಹಳ್ಳಿ ತಾಲೂಕು ವೈದ್ಯಾಧಿಕಾರಿ ಡಾ. ಶಿವರಾಜ್.