ಕನ್ನಡಪ್ರಭ ವಾರ್ತೆ ಸಾವಳಗಿ
ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದ ಮಹಾದೇವ ಸದಾಶಿವ ಡಪಳಾಪೂರ (30) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.ಮಹಾದೇವ ಡಪಳಾಪೂರ ಭಾರತೀಯ ಸೇನೆಯಲ್ಲಿ 01 ಏಪ್ರಿಲ್ 2021ರಂದು ಬಿಎಸ್ಎಫ್ (ಬಾರ್ಡರ್ ಸೆಕ್ಯೂರಿಟಿ ಪೋರ್ಸ್) ವಿಭಾಗದಲ್ಲಿ ಆಯ್ಕೆಯಾಗಿದ್ದರು.
ಮೇಘಾಲಯದ ತುರಾ, ಅಸ್ಸಾಂ ರಾಜ್ಯದ ಹೋಲಚರಾ, ಜಮ್ಮುವಿನ ನೀರೂ ಪ್ರದೇಶದಲ್ಲಿ ಜನರಲ್ ಕಾನ್ಸಟೇಬಲ ಬಿಎಸ್ಎಫ್ ಯೋಧನಾಗಿ ಸೇವೆ ಸಲ್ಲಿಸಿದ್ದರು. ರಜೆ ಪಡೆದು ಸ್ವಗ್ರಾಮ ಗದ್ಯಾಳ ಗ್ರಾಮಕ್ಕೆ ಆಗಮಿಸಿದ್ದರು.ಮರುದಿನ ಅರಕೇರಿ ಅಮೋಘ ಸಿದ್ದೇಶ್ವರ ದರ್ಶನ ಮುಗಿಸಿ ಮರಳಿ ಧಾರವಾಡ-ವಿಜಯಪೂರ ರಾಜ್ಯ ಹೆದ್ದಾರಿ ಮಾರ್ಗವಾಗಿ ಬರುವ ಸಂದರ್ಭದಲ್ಲಿ ವಿಜಯಪೂರ ಶಿವಾನಂದ ಪೆಟ್ರೋಲ್ ಬಂಕ್ ಹತ್ತಿರ ಅಪಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.ಮರಣೋತ್ತರ ಪರೀಕ್ಷೆಯ ನಂತರ ವೀರಯೋಧನ ಪಾರ್ಥಿವ ಶರೀರವನ್ನು ಗದ್ಯಾಳ ಗ್ರಾಮದವರೆಗೆ ಸೇನಾ ವಾಹನದಲ್ಲಿ ತರಲಾಯಿತು. ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ 08 ಜೂನ 2026ರಂದು ಸಾಯಂಕಾಲ 5 ಗಂಟೆಗೆ ತಮ್ಮ ಹೊಲದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಅಂತಿಮ ದರ್ಶನ ವೇಳೆಯಲ್ಲಿ ಶಾಸಕರು, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಪೊಲೀಸ್ ಸಿಬ್ಬಂದಿ, ಮಾಜಿ ಸೈನಿಕರು ಗ್ರಾಮಸ್ಥರು ಸೇರಿದಂತೆ ಅನೇಕರು ಅಗಲಿದ ಯೋಧನಿಗೆ ಕಂಬನಿ ಮಿಡಿದರು.
ಸಾರ್ವಜನಿಕರು ವೀರಯೋಧ ಅಮರ ರಹೇ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ಯೋಧನಿಗೆ ಗೌರವ ಸಲ್ಲಿಸಿದರು.
ಸೇನಾಧಿಕಾರಿಗಳು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.