ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸದಸ್ಯರ ಮಕ್ಕಳಿಗೆ ಎನ್.ಎಸ್.ಗೋಖಲೆ ಸಂಸ್ಮರಣ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಶನಿವಾರ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿ ವಾಸುದೇವ ಗೋಖಲೆ ಮಾತನಾಡಿ "ನಾವು ಎಲ್ಲೇ ಇದ್ದರೂ ನಮ್ಮ ಊರಿಗೆ ನಮ್ಮಿಂದಾದ ಸೇವೆಯನ್ನು ಪ್ರೀತಿ, ವಿಶ್ವಾಸದಿಂದ ನೀಡಬೇಕು. ವಿದ್ಯಾರ್ಥಿಗಳಲ್ಲಿ ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಹೆಚ್ಚಾಗಬೇಕಿದೆ. ಪ್ರತಿ ವಿದ್ಯಾರ್ಥಿಯು ಬ್ಯಾಂಕ್ ಅಥವಾ ಸಹಕಾರಿ ಸಂಘಗಳಲ್ಲಿ ಖಾತೆಗಳನ್ನು ತೆರೆದು ಎಳವೆಯಿಂದಲೇ ಉಳಿತಾಯದ ಮಹತ್ವವನ್ನು ತಿಳಿಯಬೇಕು. ಸ್ನೇಹದಿಂದ ಜೀವಿಸಬೇಕೇ ಹೊರತು ಸಂಶಯ ಚಿತ್ತರಾಗಬಾರದು " ಎಂದು ಹೇಳಿದರು ಸಂಘದ ಅಧ್ಯಕ್ಷ ಪ್ರಕಾಶನಾರಾಯಣ ರಾವ್ ಮಾತನಾಡಿ, ಆರ್ಥಿಕ ಸಂಕಷ್ಟದಿಂದ ಯಾರೂ ಕೂಡ ಶಿಕ್ಷಣ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಘವು ರಿಯಾಯಿತಿ ಬಡ್ಡಿ ದರದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ವಿದ್ಯಾಭ್ಯಾಸ ಸಾಲ ನೀಡುವ ಹೊಸ ಯೋಜನೆ ರೂಪಿಸಿದೆ. ಸಂಘದ ಸದಸ್ಯರಿಗೆ ಮೈಲುತುತ್ತು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ರಸಗೊಬ್ಬರಗಳಿಗೂ ವಿಸ್ತರಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು.
ವೃತ್ತಿಪರ ನಿರ್ದೇಶಕ ಹಿರಿಯ ಸಹಕಾರಿ ನಾರಾಯಣ ಫಡಕೆ ಮಾತನಾಡಿ "ಅವಿಭಜಿತ ದಕ ಜಿಲ್ಲೆಯಲ್ಲಿ ಎನ್.ಎಸ್. ಗೋಖಲೆ ಅವರು ಸಹಕಾರಿ ಕ್ಷೇತ್ರದ ಮಹಾನ್ ಚೇತನರಾಗಿದ್ದರು . ಅವರು ಮತ್ತು ನಮ್ಮೂರ ಹಿರಿಯರು ಹಾಕಿ ಕೊಟ್ಟ ಭದ್ರಬುನಾದಿಯಿಂದ ಸಂಘವು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ " ಎಂದರು.ನಿರ್ದೇಶಕ ಕಜೆ ವೆಂಕಟೇಶ್ವರ ಭಟ್ ವಿದ್ಯಾಭ್ಯಾಸ ಸಾಲದ ಮಾಹಿತಿ ನೀಡಿದರು.
ನಿರ್ದೇಶಕರಾದ ಅಜಯ್ ಕಲ್ಲಿಕಾಟ್, ಅಶ್ವಿನಿ ಎ.ಹೆಬ್ಬಾರ್, ರವಿ ಪೂಜಾರಿ, ಮೋಹಿನಿ, ಶಿವಪ್ರಸಾದ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಸುಮಾ ಗೋಖಲೆ, ವೃತ್ತಿಪರ ನಿರ್ದೇಶಕ ಬಾಬುಗೌಡ ಉಪಸ್ಥಿತರಿದ್ದರು.ನಿರ್ದೇಶಕ ಚೆನ್ನಕೇಶವ ಅರಸಮಜಲು ಸ್ವಾಗತಿಸಿದರು. ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ ವಂದಿಸಿದರು. ಸಿಇಒ ಪ್ರಸನ್ನ ಪರಾಂಜಪೆ ಹಾಗೂ ಕಕ್ಕಿಂಜೆ ಶಾಖೆ ಮ್ಯಾನೇಜರ್ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು ............
ಸಂಘದ ಕಕ್ಕಿಂಜೆ ಶಾಖೆಯ ರಾತ್ರಿ ಕಾವಲುಗಾರ ಮಾಂಕು, ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ವತಿಯಿಂದ ಬೀಳ್ಕೊಡಲಾಯಿತು. ಈ ಬಾರಿಯದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕಗಳಿಸಿದ ಸಂಘದ ವ್ಯಾಪ್ತಿಯ ಆರು ಗ್ರಾಮಗಳ ಸದಸ್ಯರ 50 ಮಕ್ಕಳಿಗೆ ಎನ್. ಎಸ್. ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಿಸಲಾಯಿತು.