ಕನ್ನಡಪ್ರಭ ವಾರ್ತೆ ಬೇಲೂರು
ಶಾಸಕ ಎಸ್.ಕೆ. ಸುರೇಶ್ ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘಿಸಿ , ಕಾನೂನನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಕರಪತ್ರ ಮುದ್ರಿಸಿ ಪುರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಖಂಡನೀಯ ಎಂದು ಸಫಾಯಿ ಕರ್ಮಚಾರಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಅಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಪುರಸಭೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಡೆದ ಗುದ್ದಲಿ ಪೂಜೆ ಸಮಾರಂಭದಲ್ಲಿ ಸರ್ಕಾರದ ಸುತ್ತೋಲೆಯ ಶಿಷ್ಟಾಚಾರ ಕ್ರಮವನ್ನು ಶಾಸಕ ಎಚ್.ಕೆ. ಸುರೇಶ್ ಉಲ್ಲಂಘನೆ ಮಾಡಿದ್ದಾರೆ. ತಮಗಿಷ್ಟ ಬಂದಂತೆ ಕಾರ್ಯಕ್ರಮ ನಡೆಸಿರುತ್ತಾರೆ. ರಾಜ್ಯ ಸರ್ಕಾರ ಅನುದಾನದ ಹಣದ ಕಾಮಗಾರಿ ಉದ್ಘಾಟನೆ ಮಾಡುವಾಗ ಪ್ರೋಟೋಕಾಲ್ನಂತೆ ಸಂಬಂಧಪಟ್ಟ ಸಂಸದರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕಿತ್ತು. ಇವರ ಮನೆ, ಸಂಸ್ಥೆಯಿಂದ ಹಣ ತಂದು ಕಾಮಗಾರಿ ನಡೆಸಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ ಎಂದರು.
ಭಟ್ಟಂಗಿಗಳಿಂದ ಜೈಕಾರ :ಹೋದಲ್ಲಿ ಬಂದಲ್ಲಿ ಕಾಮಿಡಿ ಹೀರೋ ಹಿಂದೆ ನಿಲ್ಲುವಂತೆ ಮೂರ್ ನಾಲ್ಕು ಜನ ಭಟ್ಟಂಗಿಗಳು ಶಾಸಕರ ಹಿಂದೆ ನಿಂತು ಜೈಕಾರ ಹಾಕುವುದು ಮಾಮೂಲಾಗಿದೆ. ತಾಲೂಕಿನಲ್ಲಿ ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದು ತಮಗೆ ಎಲ್ಲಿ ಬೇಕೋ ಅಲ್ಲೇ, ನಡು ರಸ್ತೆಯಲ್ಲಿ ಶಾಮಿಯಾನ ಹಾಕಿಸುತ್ತಾರೆ. ಅದಕ್ಕೆ ತಕ್ಕಂತೆ ಇವರ ಹಿಂಬಾಲಕರು ಜೈಕಾರ ಹಾಕಲು ಸಿದ್ದರಾಗಿರುತ್ತಾರೆ. ಒಂದೇ ಕಾಮಗಾರಿಗೆ ಏಳೆಂಟು ಬಾರಿ ಉದ್ಘಾಟನೆ ನಡೆಸುತ್ತಿದ್ದಾರೆ. ಗುತ್ತಿಗೆದಾರರು ಪಟ್ಟಣದ ಮುಖ್ಯ ವಾರ್ಡುಗಳಲ್ಲಿ ರಾಜರೋಷವಾಗಿ ಕಳಪೆ ಕಾಮಗಾರಿ ನಡೆಸುತ್ತಿದ್ದು ಜಾಣ ಮೌನಕ್ಕೆ ಶಾಸಕರು ಶರಣಾಗಿದ್ದಾರೆ ಎಂದು ಟೀಕಿಸಿದರು.
ಮುಖ್ಯ ಕಾರ್ಯದರ್ಶಿಗೆ ದೂರು :
ಪ್ರೋಟೋಕಾಲ್ನಂತೆ ಸಂಬಂಧಪಟ್ಟ ಸಂಸದರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿ ನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಕಾರ್ಯಕ್ರಮ ನಡೆಸಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗೆ, ಜಿಲ್ಲಾಧಿಕಾರಿಗೆ ದೂರನ್ನು ಸಲ್ಲಿಸಲಾಗಿದೆ. ಶಾಸಕರಿಗೆ, ಪುರಸಭೆ ಇಒ ಗುದ್ದಲಿ ಪೂಜೆ ಮಾಡುವಾಗ ಕನಿಷ್ಠ ಕಾನೂನು ಅರಿವು ಇರಬೇಕು. ಇಲ್ಲವಾದರೆ ಬೇರೆಯವರಿಂದ ತಿಳಿದುಕೊಳ್ಳಬೇಕು. ಜೊತೆಗೆ ಪುರಸಭೆ ಕೆಲ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದು ಅಡ್ಜಸ್ಟ್ಮೆಂಟ್ ರಾಜಕಾರಣದ ಜೊತೆಗೆ ಪಾಪ ಅವರ ಜೀವನ ಹಾಗೂ ಹಿತಾಸಕ್ತಿಗಾಗಿ ಮೌನಕ್ಕೆ ಜಾರಿದ್ದಾರೆ ಎಂದರು.