ಬೇಂದ್ರೆ ಬದುಕೇ ಮಹಾಕಾವ್ಯ: ಕಸಾಪ ಸುರೇಶ್‌

| Published : Feb 04 2024, 01:32 AM IST

ಸಾರಾಂಶ

ದೊಡ್ಡಬಳ್ಳಾಪುರ: ದ.ರಾ.ಬೇಂದ್ರೆಯವರ ಕಾವ್ಯವು ಕನ್ನಡ ಭಾಷೆ ಹಾಗೂ ಸಾಹಿತ್ಯದ ಅನನ್ಯತೆಯನ್ನು ಹೆಚ್ಚಿಸಿದೆ. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗಿರುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

ದೊಡ್ಡಬಳ್ಳಾಪುರ: ದ.ರಾ.ಬೇಂದ್ರೆಯವರ ಕಾವ್ಯವು ಕನ್ನಡ ಭಾಷೆ ಹಾಗೂ ಸಾಹಿತ್ಯದ ಅನನ್ಯತೆಯನ್ನು ಹೆಚ್ಚಿಸಿದೆ. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗಿರುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

ಅವರು ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ವರಕವಿ ದ.ರಾ.ಬೇಂದ್ರೆಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸುಗಮ ಸಂಗೀತವನ್ನು ಶ್ರೀಮಂತಗೊಳ್ಳುವಲ್ಲಿ ಬೇಂದ್ರೆಯವರ ಗೀತೆಗಳು ಪ್ರಮುಖ ಪಾತ್ರ ವಹಿಸಿವೆ. ಜೀವನಪ್ರೀತಿ, ಮಾನವೀಯ ಅಂತಃಕರಣ ಇತ್ಯಾದಿ ಮೌಲ್ಯಗಳನ್ನು ಪ್ರತಿಪಾದಿಸುವ ಬೇಂದ್ರೆಯವರ ಭಾವಗೀತೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿವೆ. ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಸೃಜನಶೀಲ ಪ್ರತಿಭೆ. ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೇ ಅವರ ಕಾವ್ಯ ವಾಚನದ ಮೂಲಕ ಎನ್ನಬಹುದು. ಅವರ ಭಾವಗೀತೆಗಳು ಯುವ ಕವಿಗಳಿಗೆ ಸದಾ ಸ್ಪೂರ್ತಿದಾಯಕ. ಕನ್ನಡಕ್ಕೆ ಜ್ಞಾನಪೀಠದ ಗರಿಯನ್ನು ತಂದುಕೊಟ್ಟ ಬೇಂದ್ರೆಯವರು ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಜವಾಹರ ನವೋದಯ ವಿದ್ಯಾಲಯ:

ದೊಡ್ಡಬಳ್ಳಾಪುರದ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಜೆ.ಪಿ. ಉಪಾಧ್ಯೆ ಮಾತನಾಡಿ, ‘ದ.ರಾ. ಬೇಂದ್ರೆ ಯವರ ಜೀವನವೇ ಒಂದು ಮಹಾಕಾವ್ಯ. ಬೇಂದ್ರೆಯವರ ಕವನಗಳು ಕಾವ್ಯ ಗುಣದಲ್ಲಿ ಉನ್ನತಮಟ್ಟ ಹೊಂದಿವೆ. ಬೇಂದ್ರೆಯವರ ಕಾವ್ಯ ಭಾವಗೀತೆ ಮತ್ತು ಜಾನಪದವನ್ನು ಜನಪ್ರಿಯಗೊಳಿಸಿತು. ಭಾಷೆಯ ಪದ ಸಂಪತ್ತು ಮತ್ತು ನಾದ ಸಂಪತ್ತು ಎರಡನ್ನು ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಸಿ.ನಿರ್ಮಲ, ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ‌ವಿದ್ಯಾರ್ಥಿಗಳು ಬೇಂದ್ರೆ ವಿರಚಿತ ಗೀತೆಗಳನ್ನು ಹಾಡುವ ಮೂಲಕ ಗೀತನಮನ ಸಲ್ಲಿಸಿದರು.31ಕೆಡಿಬಿಪಿ4-

ದೊಡ್ಡಬಳ್ಳಾಪುರ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ದ.ರಾ.ಬೇಂದ್ರೆ ಜನ್ಮ ದಿನಾಚರಣೆಯಲ್ಲಿ ಬೇಂದ್ರೆ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.