ಬಡವರನ್ನು ಬದುಕಿಸಿದ ನರೇಗಾ, ಅನ್ನಭಾಗ್ಯ

| Published : Sep 29 2024, 01:38 AM IST

ಸಾರಾಂಶ

ಡಾ.ಡಿ. ಶ್ರೀನಿವಾಸ ಮಣಗಳ್ಳಿ ಸಂಪಾದಿತ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೈಸೂರುನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಕೊರೋನಾ ಸಂದರ್ಭದಲ್ಲಿ ಬಡವರನ್ನು, ಕೆಳ ಮಧ್ಯಮ ವರ್ಗದವರನ್ನು ಬದುಕಿಸಿತು. ಹೀಗಾಗಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚೆಚ್ಚು ಮಾತಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗ, ಇನ್ಸಿಟಿಟ್ಯೂಟ್ ಫಾರ್ ಸೋಷಿಯಲ್ ವರ್ಕರ್ಸ್ ಫಾರ್ ಆ್ಯಕ್ಷನ್ ರಿಸರ್ಚ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಎಂಬ ಡಾ.ಡಿ. ಶ್ರೀನಿವಾಸ ಮಣಗಳ್ಳಿ ಅವರ ಸಂಪಾದಿತ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ಕಾಂಗ್ರೆಸ್ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಧನಾತ್ಮಕ ಪರಿಣಾಮವನ್ನು ಬೀರಿದ್ದು, ಈ ಯೋಜನೆಗಳನ್ನು ಜಾರಿಗೊಳಿಸಿರುವುದು ನಮಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದರು.ಸರ್ಕಾರ ಜಾರಿಗೆ ತರುವ ಕೆಲವು ಯೋಜನೆಗಳಿಗೆ ಜಾತಿ, ಧರ್ಮ, ಆರ್ಥಿಕ ಮಾನದಂಡಗಳ ಇತಿಮಿತಿ ಇರುವುದಿಲ್ಲ. ಎಲ್ಲರೂ ಫಲಾನುಭವಿಗಳಾಗುತ್ತಾರೆ. ಇದರಿಂದ ಸಾಮಾಜಿಕವಾಗಿ ಅವರಿಗೆ ಅನುಕೂಲವಾಗುತ್ತದೆ. ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ಸೃಷ್ಟಿ ಆಯಿತು. ಹೀಗಾಗಿ, ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ ಹಲವು ಭಾಗ್ಯಗಳು, ಗ್ಯಾರಂಟಿ ಯೋಜನೆಗಳ ಮೂಲಕ ಹಿಂದುಳಿದ ವರ್ಗಗಳಿಗೆ, ಬಡವರಿಗೆ ಆರ್ಥಿಕ ಶಕ್ತಿ ನೀಡಿದೇವು ಎಂದು ಅವರು ತಿಳಿಸಿದರು.ಸ್ವಾತಂತ್ರ್ಯ ಪಡೆದ ಬಳಿಕ ನಮಗೆ ರಾಜಕೀಯ ಪ್ರಜಾಪ್ರಭುತ್ವ ದೊರೆಕಿತು. ಆದರೆ, ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ದೊರೆಯಲಿಲ್ಲ. ಅವಕಾಶ ವಂಚಿತರಿಗೆ ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ದೊರಕಿದರೆ ಸಮಾಜದಲ್ಲಿ ಸಮಾನತೆ ಬರುತ್ತದೆ. ಎಲ್ಲಿಯವರೆಗೂ ಸಮಾನತೆ ಬರುವುದಿಲ್ಲವೋ ಅಲ್ಲಿಯವರೆವಿಗೂ ರಾಜಕೀಯ ಪ್ರಜಾಪ್ರಭುತ್ವ ಪ್ರಯೋಜನ ಆಗುವುದಿಲ್ಲ. ಹೀಗಾಗಿ, ಆರ್ಥಿಕ- ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ಚಾಲನೆ ಸಿಕ್ಕರೆ ಜಾತ್ಯಾತೀತ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತದೆ. ಅಸಮಾನತೆ ನಿವಾರಣೆಯಾಗುತ್ತದೆ ಎಂದರು.ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ಧ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಗಳಿಂದ ಸಮ ಸಮಾಜದ ಆಶಯ ಈಡೇರುವುದಿಲ್ಲ. ಈ ಕಾರಣಕ್ಕೆ ಹಲವು ಭಾಗ್ಯಗಳನ್ನು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದಕ್ಕೆ 1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಾಡಿದ ಭಾಷಣವೇ ನಮಗೆ ಸ್ಫೂರ್ತಿ ಎಂದು ಅವರು ಹೇಳಿದರು. ಜನ ಕಲ್ಯಾಣಕ್ಕಾಗಿ ಗ್ಯಾರಂಟಿಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿ, 2017 ರಿಂದ ಭಾರತದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಾ, ಕೊರೋನಾ ಕಾಲದಲ್ಲಿ ಇನ್ನಷ್ಟು ನೆಲಕಚ್ಚಿತು. ನಿರುದ್ಯೋಗ, ಬಡತನ ಇಮ್ಮಡಿಯಾಗಿ ಜಿಡಿಪಿ ಕುಸಿದಿತ್ತು. ಇಂಥಾ ಭಯಾನಕ ಆರ್ಥಿಕ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳು ರಾಜ್ಯ ಸ್ಮಶಾನ ಆಗದಂತೆ ತಡೆದಿದೆ. ಕೊರೋನಾ ಕಾಲದ ಬಿಕ್ಕಟ್ಟುಗಳಿಗೆ ಗ್ಯಾರಂಟಿಗಳು ಪರಿಹಾರವಾಯಿತು. ಇದನ್ನು ನಾವೆಲ್ಲಾ ಧೈರ್ಯದಿಂದ ಹೇಳಬೇಕು. ದೇಶಕ್ಕೆ ಮಾದರಿಯಾದ ಈ ಯೋಜನೆಗಳು ಜನಕಲ್ಯಾಣಕ್ಕೆ ಹೇಗೆ ಸಹಕರಿಸಿತು ಎಂಬುದನ್ನು ಹೇಳಬೇಕು ಎಂದರು. ಧಾರವಾಡದ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಂ. ಚಂದ್ರ ಪೂಜಾರಿ ಮಾತನಾಡಿ, ಉಚಿತ ಯೋಜನೆಗಳನ್ನು ಜಾರಿ ತಂದ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಮಾನವ ಅಭಿವೃದ್ಧಿ ಸೂಚ್ಯಾಂಕಗಳಲ್ಲಿ ಮೊದಲ ಸ್ಥಾನಗಳಲ್ಲಿದ್ದು, ಜಿಡಿಪಿ ಬೆಳವಣಿಗೆ ಉತ್ತಮವಾಗಿವೆ. ಉಚಿತ ಯೋಜನೆಗಳನ್ನು ಜಾರಿ ಮಾಡದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ರಾಜ್ಯಗಳು ಮಾನವ ಅಭಿವೃದ್ಧಿ ಸೂಚ್ಯಾಂಕಗಳಲ್ಲಿ ಅತ್ಯಂತ ಕುಸಿದು, ಜಿಡಿಪಿ ಕೂಡ ಕುಸಿದಿದೆ ಎಂದು ಹೇಳಿದರು.ನಾಟಕಕಾರ ಡಾ.ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಪ್ರಜಾತಂತ್ರವನ್ನು ಗಟ್ಟಿಗೊಳಿಸಿವೆ. ಬಡವರಿಗೆ ಈ ಗ್ಯಾರಂಟಿಗಳು ಸಾಮಾಜಿಕವಾಗಿ ಚಾಲನಾ ಸಾಮರ್ಥ್ಯವನ್ನು ನೀಡಿವೆ. ಸಿದ್ದರಾಮಯ್ಯ ಅವರು ಸೂಕ್ಷ್ಮ ಮನಸ್ಸಿನ ನಾಯಕರು. ಇವರಿಂದ ಮಾತ್ರ ಸಮಾಜಕ್ಕೆ ಈ ಚಾಲನಾ ಸಾಮರ್ಥ್ಯ ನೀಡಲು ಸಾಧ್ಯ. ಹಸಿದವರ ಹೊಟ್ಟೆಗೆ ಅನ್ನ ಕೊಡುವುದೇ ದೇವರಿಗೆ ಕೊಡುವ ಕಾಣಿಕೆ. ಇದನ್ನು ನಾವು ಪ್ರಾಮಾಣಿಕವಾಗಿ ಒಪ್ಪಿ, ಸಾರ್ವಜನಿಕವಾಗಿ ಹೇಳಬೇಕಿದೆ ಎಂದು ತಿಳಿಸಿದರು.ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೃತಿಯ ಸಂಪಾದಕ ಡಾ.ಡಿ. ಶ್ರೀನಿವಾಸ ಮಣಗಳ್ಳಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಮಾಜಿ ಮೇಯರ್ ಪುರುಷೋತ್ತಮ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಅಹಿಂದ ಜವರಪ್ಪ ಮೊದಲಾದವರು ಇದ್ದರು.----ಬಾಕ್ಸ್... ಸಿಎಂಗೆ ಜೋಮಾಲೆ ಸರ ನೀಡಿದ ಗೃಹಲಕ್ಷ್ಮೀ ಫಲಾನುಭವಿದುಂಡೇಗಾಲದ ಚಿನ್ಮಯಿ ಎಂಬವರು ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಸ್ವಯಂ ಉದ್ಯೋಗ ಶುರು ಮಾಡಿದ್ದೇನೆ. ಬಟ್ಟೆಯಿಂದ ಜೋಮಾಲೆ ಸರವನ್ನು ಮಾಡಿ ಮಾರಾಟ ಮಾಡುತ್ತಿದ್ದೇನೆ. ಇದರಿಂದ ದಿನಕ್ಕೆ ನೂರಾರು ರೂಪಾಯಿ ಸಂಪಾದನೆಯಾಗುತ್ತಿದೆ ಎಂದು ಖುಷಿಯಿಂದ ಹೇಳಿ, ತಾವು ತಂದಿದ್ದ ಜೋಮಾಲೆ ಸರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.ನಂಜನಗೂಡಿನ ಪಾರ್ವತಾಂಬ ಅವರು, ಕ್ಯಾಂಟೀನ್ ನಡೆಸುತ್ತಿದ್ದು, ದಿನಕ್ಕೆ ಸಾವಿರ ರೂಪಾಯಿ ಲಾಭ ಕಾಣುತ್ತಿದ್ದೇನೆ ಎಂದರು. ಮಂಡಿ ಮೊಹಲ್ಲಾದ ರುಕ್ಮೀಣಿ ಮಾತನಾಡಿ, 10 ತಿಂಗಳ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಅದರಿಂದ ಸೊಸೆಗೆ ಹೊಸ ಹೊಲಿಗೆ ಯಂತ್ರ ತೆಗೆದುಕೊಟ್ಟಿದ್ದೇನೆ. ಈಗ ಆಕೆ ದಿನಕ್ಕೆ 500 ರೂಪಾಯಿವರಗೆ ಸಂಪಾದನೆ ಮಾಡುತ್ತಿದ್ದಾಳೆ ಎಂದರು.-----ಬಾಕ್ಸ್... ಅನ್ನಕಾಗಿ ಕಾಯುತ್ತಿದ್ದರುಹೊಟ್ಟೆ ತುಂಬಾ ಹಿಟ್ಟು- ಬಾಯಿ ತುಂಬಾ ಅನ್ನ ಎಂದು ನಮ್ಮ ತಾಯಿ ಹೇಳುತ್ತಿದ್ದರು. ನಮ್ಮ ಬಾಲ್ಯದ ಕಾಲದಲ್ಲಿ ಜನರು ಅನ್ನವನ್ನೇ ಕಂಡಿರಲಿಲ್ಲ. ಕೂಲಿ ಮಾಡಿ ಅದರಿಂದ ಬಂದ ಹಣದಲ್ಲಿ ರಾತ್ರಿ ದಿನಸಿ ತಂದು ಮುದ್ದೆ ಮಾಡಿಕೊಂಡು ಮನೆಯವರೆಲ್ಲ ಊಟ ಮಾಡಬೇಕಾಗಿತ್ತು. ಕೆಲವು ಸಲ ಜಮೀನುದಾರರ ಮನೆಯವರು ನೀಡಿದ ಮುದ್ದೆಯನ್ನು ಅಲ್ಲಿ ಊಟ ಮಾಡದೇ ಮನೆ ಬಂದು ಮನೆ ಮಂದಿಯಲ್ಲ ಹಂಚಿಕೊಂಡು ತಿನ್ನಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಜ್ವರ- ಬೇಧಿ ಯಂತಹ ಅನಾರೋಗ್ಯ ಕಾಡಿದಾಗ ಆ ಜನರು ಮುಷ್ಠಿ ಅನ್ನಕ್ಕಾಗಿ ಉಳ್ಳವರ ಮನೆ ಬಾಗಿಲಿನಲ್ಲಿ ಕಾದು ನಿಲ್ಲುತ್ತಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಹಿನ್ನೆಲೆಯಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅನ್ನದ ಮಹತ್ವವನ್ನು ಸಾರುವ ಹಾಗೂ ಅನ್ನಭಾಗ್ಯ ಯೋಜನೆಯ ಕುರಿತು ತಿಳಿಸುವ ‘ಅನ್ನ’ ಎನ್ನುವ ಸಿನಿಮಾ ಬಂದಿದೆ. ನಾನು ಆ ಸಿನಿಮಾವನ್ನು ನೋಡಿದ್ದೇನೆ. ನೀವು ಹೋಗಿ ನೋಡಿ ಎಂದು ಅವರು ಕರೆ ನೀಡಿದರು.----ಕೋಟ್...ನಮ್ಮ ಭಾಗ್ಯ ಯೋಜನೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಗಳು ಆಡಿಕೊಂಡರು. ಈಗಲೂ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಕಾಂಗ್ರೆಸ್ ಸರ್ಕಾರಕ್ಕೆ ಧನ್ಯತೆ ಅರ್ಪಿಸುತ್ತಿದ್ದಾರೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ