ಸಾರಾಂಶ
ರಾಜ್ಯಪಾಲರ ಹೆಸರಿಗೆ ಖಾತಾ ವರ್ಗಾವಣೆಯಾಗಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಕ್ಕುಪತ್ರ ನೀಡಿಲ್ಲ. ೧೫ ದಿನದೊಳಗೆ ಹಕ್ಕುಪತ್ರ ನೀಡದಿದ್ದರೆ ಹೋರಾಟ ಮುಂದುವರಿಸುವುದಾಗಿ ಫಲಾನುಭವಿಗಳು ಎಚ್ಚರಿಸಿದ್ದಾರೆ.
ಯಲಬುರ್ಗಾ:
ಮುರಡಿ ಗ್ರಾಮದ ಸರ್ವೇ ನಂಬರ್ ೯೮ರ ಜಮೀನಲ್ಲಿ ೨೦೦೯-೧೦ರಲ್ಲಿ ನಿವೇಶನ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಈ ವರೆಗೂ ಹಕ್ಕುಪತ್ರ ವಿತರಿಸಿಲ್ಲ ಎಂದು ಆಕ್ರೋಶಗೊಂಡ ಫಲಾನುಭವಿಗಳು ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.ರಾಜ್ಯಪಾಲರ ಹೆಸರಿಗೆ ಖಾತಾ ವರ್ಗಾವಣೆಯಾಗಿದ್ದರೂ ಗ್ರಾಪಂ ಆಡಳಿತ ಮಂಡಳಿ ಹಕ್ಕುಪತ್ರ ನೀಡಿಲ್ಲ. ೧೫ ದಿನದೊಳಗೆ ಹಕ್ಕುಪತ್ರ ನೀಡದಿದ್ದರೆ ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಹೋರಾಟಗಾರ ನಾಗರಾಜ ಹಾಲಳ್ಳಿ ಹಾಗೂ ಫಲಾನುಭವಿಗಳು ಎಚ್ಚರಿಕೆ ನೀಡಿದರು.
ಹೋರಾಟಗಾರ ಶ್ರೀಕಾಂತಗೌಡ ಮಾಲಿಪಾಟೀಲ್ ಮಾತನಾಡಿ, ಆಶ್ರಯ ಮನೆ ಹಂಚಿಕೆಯಲ್ಲಿ ಗ್ರಾಮಸಭೆ ನಡೆಸದೆ ತಾರತಮ್ಯ ಎಸಗಿದ ಗ್ರಾಪಂ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರಿಗೆ ಮನೆ ಮಂಜೂರು ಮಾಡಬೇಕಾದರೆ ಫಲಾನುಭವಿಗಳಿಂದ ಸದಸ್ಯರು ₹ ೨೦ರಿಂದ ₹ ೩೦ ಸಾವಿರ ಕೊಟ್ಟರೆ ಮನೆ ಮಂಜೂರು ಮಾಡುತ್ತೇವೆ ಎನ್ನುತ್ತಾರೆ ಎಂದು ಆರೋಪಿಸಿದರು.ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ವಸತಿ ಯೋಜನೆಯ ಬಸವರಾಜ ಹಳ್ಳಿ, ೧೫ ದಿನಗಳಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿದ ನಂತರ ಹೋರಾಟ ಹಿಂಪಡೆಯಲಾಯಿತು.
ಹೋರಾಟದಲ್ಲಿ ಅಯ್ಯನಗೌಡ ಕೆಂಚಮ್ಮನವರ, ಭೀಮಜ್ಜ ಗುರಿಕಾರ, ಸಿದ್ದು ಮಣ್ಣಿನವರ, ಪುರಂದಪ್ಪ ಹರಿಜನ, ಮುನಿಯಪ್ಪ ಗುರಿಕಾರ, ಪಾಂಡು ಛಲವಾದಿ, ಬಸಣ್ಣ ಗುರಿಕಾರ, ಹವಳೆಪ್ಪ ತಳವಾರ, ಗವಿಸಿದ್ದಪ್ಪ ಬಾರಕೇರಿ, ಸಣ್ಣಬಾಳಪ್ಪ ಬಂಡಾರಿ ಉಪಸ್ಥಿತರಿದ್ದರು.ಮುರಡಿ ಗ್ರಾಮದ ೧೧೩ ಫಲಾನುಭವಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಈ ಫಲಾನುಭವಿಗಳಲ್ಲಿ ಯಾರಾದರೂ ಮೃತರಾಗಿದ್ದರೆ, ಅವರ ಪರವಾಗಿ ಕುಟುಂಬಕ್ಕೆ ಹಕ್ಕುಪತ್ರ ನೀಡಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.