ಸಾರಾಂಶ
ಹಾವೇರಿ: ದಾನ, ಧರ್ಮ, ಪರೋಪಕಾರಗಳಿಂದ ವ್ಯಕ್ತಿಯು ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗುತ್ತಾನೆ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕನ್ನು ಪಡೆದು ಆರೋಗ್ಯ ಮತ್ತು ಯಶಸ್ಸನ್ನು ತಂದು ಕೊಡುವದೇ ಕಾರ್ತಿಕ ಮಾಸದ ವಿಶೇಷ. ಈ ಆಚರಣೆಯಿಂದ ವ್ಯಕ್ತಿ ವಿಶೇಷ ಶಕ್ತಿ ಪಡೆದುಕೊಳ್ಳುತ್ತಾನೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಇಜಾರಿಲಕಮಾಪುರದ ನಂದಿ ಲೇಔಟ್ನಲ್ಲಿ ಹಮ್ಮಿಕೊಂಡಿದ್ದ ಬನ್ನಿ ಮಹಾಂಕಾಳಿಯ ಕಾರ್ತಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಭಾರತದ ಪ್ರತಿಯೊಂದು ಹಬ್ಬ,ಆಚರಣೆಗಳು ವೈಜ್ಞಾನಿಕ ಹಿನ್ನೆಲೆ ಒಳಗೊಂಡಿವೆ. ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿ ಚರ್ಮದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಬೇಗನೆ ಕತ್ತಲೆಯಾಗುತ್ತದೆ. ಆದ್ದರಿಂದ ಈ ಮಾಸದಲ್ಲಿ ದೀಪ ಬೆಳಗಿಸುವುದರಿಂದ ಪ್ರಕೃತಿಯೊಂದಿಗೆ ಮಾನವನ ಹೊಂದಾಣಿಕೆಯೂ ಆಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರೇಲಿಂಗದಹಳ್ಳಿಯ ಹನುಮಂತಪ್ಪ ಕರವಾಳ ಅವರಿಂದ ಭಕ್ತಿಗೀತೆ ಮತ್ತು ಜನಪದ ಗೀತೆಗಳು ಜರುಗಿದವು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಮಿತಿನ ಅಧ್ಯಕ್ಷ ಕರಬಸಪ್ಪ ಗುಜ್ಜರಿ ವಹಿಸಿದ್ದರು. ಸಿದ್ದಪ್ಪ ಸುತ್ತಕೋಟಿ, ಶಂಕ್ರಪ ಹರಿಹರ, ಪರಶುರಾಮ ಸವಣೂರ, ರವಿ ಹೊಸಮನಿ, ಶಿವಪ್ಪ ಬಡಗೌಡರ, ಶರಣಪ್ಪ ಹೊಂಬಳ್ಳಿ, ಅಶೋಕ ದಂಡಣ್ಣನವರ, ನಂದಾ ನಾಗಭೂಷಣ, ಎಂ.ಎಂ. ನದಾಫ ಇತರರು ಇದ್ದರು. ಸಿ. ಎಸ್. ಮರಳಿಹಳ್ಳಿ ಸ್ವಾಗತಿಸಿದರು. ಶಿವಯೋಗಿ ಅಂಗಡಿ ನಿರೂಪಿಸಿದರು.