ಸಾರಾಂಶ
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಬುಧವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿಯೂ ಉಸಿರುಗಟ್ಟಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು : ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಬುಧವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿಯೂ ಉಸಿರುಗಟ್ಟಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಬೆಳಕಿಗೆ ಬಂದಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಆರು ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐದು ಸೇರಿ ಒಟ್ಟು 11 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೆಲವರ ದೇಹದಲ್ಲಿ ಮೂಳೆಗಳು ಮುರಿದಿರುವುದೂ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಬಳಿಕ ಕುಟುಂಬಸ್ಥರು ಮೃತದೇಹಗಳನ್ನು ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಕಾಲ್ತುಳಿತ ದುರಂತದಲ್ಲಿ ಯಲಹಂಕ ಕಟ್ಟಿಗೇನಹಳ್ಳಿ ನಿವಾಸಿ ದಿವ್ಯಾಂಶಿ(14), ಉತ್ತರ ಕನ್ನಡ ಜಿಲ್ಲೆ ರವೀಂದ್ರ ನಗರದ ಅಕ್ಷತಾ ಪೈ(26), ಎಂ.ಎಸ್.ರಾಮಯ್ಯ ಬಡಾವಣೆಯ ಭೂಮಿಕ್(19), ಕೋಲಾರದ ಎಸ್.ವಿ.ಲೇಔಟ್ನ ಸಹನಾ(23), ದೊಡ್ಡಕಲ್ಲಸಂದ್ರದ ಚಿನ್ಮಯಿ ಶೆಟ್ಟಿ(19), ತುಮಕೂರು ಜಿಲ್ಲೆ ನಾಗಸಂದ್ರ ಗ್ರಾಮದ ಮನೋಜ್ ಕುಮಾರ್(20), ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕೆ.ಟಿ.ಶ್ರವಣ್(20), ಯಾದಗಿರಿ ಜಿಲ್ಲೆ ಹೊನಿಗೇರಿ ಗ್ರಾಮದ ಶಿವಲಿಂಗ(17), ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ರಾಯಸಮುದ್ರದ ಪೂರ್ಣಚಂದ್ರ(20), ತಮಿಳುನಾಡಿನ ಕೊಯಮತ್ತೂರಿನ ಕಾಮಾಕ್ಷಿದೇವಿ(29) ಹಾಗೂ ಯಲಹಂಕ ನ್ಯೂಟೌನ್ ಚಿಕ್ಕಬೊಮ್ಮಸಂದ್ರದ ಪ್ರಜ್ವಲ್(22) ಬಲಿಯಾಗಿದ್ದರು.