ಸಾರಾಂಶ
ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 114 ಮಂದಿಗೆ ಸೋಂಕು ದೃಢಪಟ್ಟಿದ್ದು, ಮೈಸೂರಿನಲ್ಲಿ ಕೊರೋನಾ ಸೋಂಕಿತ 63 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವರದಿಯಾದ ಕೊರೋನಾ ಸಾವು ಪ್ರಕರಣಗಳು 3ಕ್ಕೆ ಏರಿಕೆಯಾಗಿವೆ.
ಬೆಂಗಳೂರು : ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 114 ಮಂದಿಗೆ ಸೋಂಕು ದೃಢಪಟ್ಟಿದ್ದು, ಮೈಸೂರಿನಲ್ಲಿ ಕೊರೋನಾ ಸೋಂಕಿತ 63 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವರದಿಯಾದ ಕೊರೋನಾ ಸಾವು ಪ್ರಕರಣಗಳು 3ಕ್ಕೆ ಏರಿಕೆಯಾಗಿವೆ.
ಮೇ 15 ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಕಿಡ್ನಿ ವೈಫಲ್ಯ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟ ಸಮಸ್ಯೆ ಹೊಂದಿದ್ದ ಅವರು ಮೇ 25 ರಂದು ಮೃತಪಟ್ಟಿದ್ದಾರೆ. ಗಂಟಲಿನ ದ್ರವವನ್ನು ಪರೀಕ್ಷೆ ನಡೆಸಿದ್ದು ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗೆಳಲ್ಲಿ 114 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ದಿನವೊಂದರಲ್ಲಿನ ಪ್ರಕಣಗಳ ಸಂಖ್ಯೆ ಶತಕದ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 234ಕ್ಕೆ ತಲುಪಿದೆ. ಕೋವಿಡ್ ವೈರಾಣು ಪತ್ತೆ ಸಂಬಂಧ ಕಳೆದ 24 ಗಂಟೆಗಳಲ್ಲಿ 460 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಶೇ.24.7 ರಷ್ಟು ಪಾಸಿಟಿವಿಟಿ ದರದೊಂದಿಗೆ ಸೋಂಕು ವರದಿಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ 223 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದಂತೆ 11 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಜ.1ರಿಂದ ಈವರೆಗೂ ಒಟ್ಟು 367 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 130 ಮಂದಿ ಚೇತರಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.