ಕಲಬುರಗಿ ಡಿಸಿ ಒಪ್ಪುವ ಹಾಗೆ ಕ್ಷಮೆ ಕೇಳಿ: ರವಿಕುಮಾರ್‌ಗೆ ಕೋರ್ಟ್‌

| N/A | Published : May 30 2025, 06:31 AM IST

N Ravikumar
ಕಲಬುರಗಿ ಡಿಸಿ ಒಪ್ಪುವ ಹಾಗೆ ಕ್ಷಮೆ ಕೇಳಿ: ರವಿಕುಮಾರ್‌ಗೆ ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರುನುಮ್‌ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಕ್ಷಮೆಯಾಚಿಸುವಂತೆ ವಿಧಾನ ಪರಿಷತ್​ ಬಿಜೆಪಿ ಸದಸ್ಯ ಎನ್.ರವಿಕುಮಾರ್‌ಗೆ ಹೈಕೋರ್ಟ್​ ತಾಕೀತು ಮಾಡಿದೆ.

  ಬೆಂಗಳೂರು : ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರುನುಮ್‌ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಕ್ಷಮೆಯಾಚಿಸುವಂತೆ ವಿಧಾನ ಪರಿಷತ್​ ಬಿಜೆಪಿ ಸದಸ್ಯ ಎನ್.ರವಿಕುಮಾರ್‌ಗೆ ಹೈಕೋರ್ಟ್​ ತಾಕೀತು ಮಾಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಲಬುರಗಿಯ ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ ರದ್ದುಪಡಿಸುವಂತೆ ಕೋರಿ ರವಿಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರ ಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ಈಗಾಗಲೇ ರವಿಕುಮಾರ್‌ ಪ್ರಕರಣ ಸಂಬಂಧ ಕ್ಷಮೆಯಾಚಿಸಿದ್ದಾರೆಂದು ಅವರ ಪರ ವಕೀಲರು ನೀಡಿದ ಹೇಳಿಕೆ ಪರಿಗಣಿಸಿದ ನ್ಯಾಯಪೀಠ, ಕ್ಷಮೆಯಾಚನೆಯನ್ನು ಫೌಜಿಯಾ ತರುನುಮ್‌ ಒಪ್ಪಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿ ಪ್ರಮಾಣ ಪತ್ರ ಸಲ್ಲಿಸುವವರೆಗೂ ಅರ್ಜಿ ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.

ಪ್ರಕರಣದ ತನಿಖೆಗೆ ಸಹಕರಿಸಿದರೆ ರವಿಕುಮಾರ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ್ದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ರವಿಕುಮಾರ್​ ಅವರ ಹೇಳಿಕೆಯ ವಿಡಿಯೋವನ್ನು ಪೆನ್‌ಡ್ರೈವ್‌ ಮೂಲಕ ಸಲ್ಲಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು. ಜೊತೆಗೆ, ಅರ್ಜಿ ಸಂಬಂಧ ಸರ್ಕಾರ ಮತ್ತು ದೂರುದಾರ ಕಲಬುರಗಿ ನಿವಾಸಿ ದತ್ತಾತ್ರೇಯ ಅವರಿಗೆ ನೋಟಿಸ್​ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿತು.

==

ಜವಾಬ್ದಾರಿ ಸ್ಥಾನದಲ್ಲಿರುವವರಿಂದ ಇಂಥ ಹೇಳಿಕೆ ಸಲ್ಲ

- ಪ್ರಕರಣಕ್ಕೆ ಅಂತ್ಯ ಹಾಡಬೇಕು, ಮುಂದುವರಿಸುವಂತಿಲ್ಲ

- ಫೌಜಿಯಾ ತರುನುಮ್‌ ಜತೆ ರವಿಕುಮಾರ್‌ ಮಾತನಾಡಲಿ

- ಡಿಸಿ ಒಪ್ಪಿದ್ರೆ ಈ ಬಗ್ಗೆ ಕೋರ್ಟ್‌ಗೆ ದಾಖಲೆ ಸಲ್ಲಿಸಿಲು ಸೂಚನೆ

ಇದಕ್ಕೂ ಮುನ್ನ ವಿಚಾರಣೆ ವೇಳೆ ರವಿಕುಮಾರ್‌ ಪರ ವಕೀಲರು, ಅರ್ಜಿದಾರರು ಯಾವುದೇ ಸಮುದಾಯ ಮತ್ತು ಜಾತಿಯನ್ನು ಪ್ರಸ್ತಾಪಿಸಿಲ್ಲ. ಜಾತಿ ಆಧಾರದ ಮೇಲೆ ಅವಮಾನ ಮಾಡಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಹೀಗಿದ್ದರೂ ಅವರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಏಕೆ ಪ್ರಕರಣ ದಾಖಲಿಸಲಾಗಿದೆ? ಆ ಕಾಯ್ದೆಯು ಈ ಪ್ರಕರಣಕ್ಕೆ ಹೇಗೆ ಅನ್ವಯಿಸುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದು ವಾದಿಸಿದರು.

ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಮಧ್ಯಪ್ರದೇಶದ ಸಚಿವರು ನೀಡಿದ್ದ ಹೇಳಿಕೆ ಸಂಬಂಧ ಸುಪ್ರೀಂಕೋರ್ಟ್​ ನೀಡಿದ ಆದೇಶಗಳನ್ನು ಗಮನಿಸಿದ್ದೀರಾ? ಅರ್ಜಿದಾರರ ಪ್ರಕರಣವೂ ಆ ಪ್ರಕರಣಕ್ಕಿಂತ ಭಿನ್ನವಾಗಿಲ್ಲ. ಇಂತಹ ಹೇಳಿಕೆಗಳು ನೀಡುವಂತಹದ್ದಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅಂತಹ ಹೇಳಿಕೆ ನೀಡಬಾರದು. ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೂ ಪ್ರಕರಣಕ್ಕೆ ಅಂತ್ಯ ಹಾಡಬೇಕೇ ಹೊರತು ಮುಂದುವರೆಸುವ ಅಗತ್ಯವಿಲ್ಲ. ಇದರಿಂದ ಫೌಜಿಯಾ ತರುನುಮ್‌ ಅವರೊಂದಿಗೆ ಮಾತನಾಡಲು ರವಿಕುಮಾರ್‌ಗೆ ಸೂಚಿಸಿ. ಪ್ರಕರಣಕ್ಕೆ ಅಂತ್ಯ ಹಾಡಲು ಫೌಜಿಯಾ ತರುನುಮ್‌ ಒಪ್ಪಿಗೆ ಸೂಚಿಸಿದರೆ, ಆ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಈ ಮಧ್ಯೆ ಸರ್ಕಾರಿ ವಕೀಲರು, ಎಫ್​ಐಆರ್ ನಲ್ಲಿ ಅರ್ಜಿದಾರರ ನೀಡಿರುವ ಹೇಳಿಕಗಳ ಪೈಕಿ ಅರ್ಧದಷ್ಟು ಮಾತ್ರ ವಿವರಿಸಲಾಗಿದೆ. ಇನ್ನುಳಿದ ಅಂಶಗಳನ್ನು ವಿವರಿಸಿಲ್ಲ. ಆದ್ದರಿಂದ ಅರ್ಜಿಗೆ ವಿವರವಾದ ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ದತ್ತಾತ್ರೇಯ ಎಂಬುವವರು ಮೇ 26ರಂದು ಪೊಲೀಸರಿಗೆ ದೂರು ನೀಡಿ, ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೇ 24ರಂದು ನಡೆದ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ರವಿಕುಮಾರ್‌, ಕಲಬುರಗಿ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನುಮ್‌ ಅವರು ಪಾಕಿಸ್ತಾನದವರೋ ಅಥವಾ ಭಾರತದವರೋ ಎನ್ನುವುದು ನನಗೆ ಖಚಿತವಾಗುತ್ತಿಲ್ಲ. ಅವರು ಮುಸ್ಲಿಮರು ಆಗಿರುವುದರಿಂದ ತಮ್ಮ ಧರ್ಮದ ಕಾರಣದಿಂದ ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದಲು ಅಸಮರ್ಥರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದರಿಂದ ಅವರ ವಿರುದ್ಧ ಕೋಮು ಸೌಹಾರ್ದತೆ ಧಕ್ಕೆ ತಂದ, ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಸೃಷ್ಟಿಸಲು ಯತ್ನಿಸಿದ, ಸರ್ಕಾರಿ ಅಧಿಕಾರಿಗೆ ಬೆದರಿಕೆವೊಡ್ಡಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

Read more Articles on