ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದು ದುಂಡಾವರ್ತನೆ ತೋರಿದ್ದ ಬಿಹಾರ ಮೂಲದ ಸಾಫ್ಟ್‌ವೇರ್ ಉದ್ಯೋಗಿ, ನೊಂದ ಚಾಲಕನನ್ನು ತಮ್ಮ ಪತಿ ಜತೆ ಭೇಟಿಯಾಗಿ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದು ದುಂಡಾವರ್ತನೆ ತೋರಿದ್ದ ಬಿಹಾರ ಮೂಲದ ಸಾಫ್ಟ್‌ವೇರ್ ಉದ್ಯೋಗಿ, ನೊಂದ ಚಾಲಕನನ್ನು ತಮ್ಮ ಪತಿ ಜತೆ ಭೇಟಿಯಾಗಿ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.

ಬೆಳ್ಳಂದೂರಿನಲ್ಲಿ ಸ್ಥಳೀಯ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೂಲಕ ಆಟೋ ಚಾಲಕ ಲೋಕೇಶ್ ಅವರನ್ನು ಭೇಟಿಯಾಗಿ ಸಾಫ್ಟ್‌ವೇರ್ ಉದ್ಯೋಗಿ ದಂಪತಿ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾವು ಕನ್ನಡಿಗರು ಅಥವಾ ಕನ್ನಡ ನಾಡಿನ ವಿರೋಧಿಗಳಲ್ಲ. ಸಿಟ್ಟಿನಲ್ಲಿ ಈ ತಪ್ಪಾಗಿದೆ. ನನಗೆ ಕನ್ನಡಿಗರ ಮೇಲೆ ಅಪಾರ ಗೌರವಾದರಗಳಿದೆ ಎಂದು ದಂಪತಿ ಹೇಳಿದ್ದಾರೆ. ಇದೇ ವೇಳೆ ಲೋಕೇಶ್ ಅವರ ಕಾಲಿಗೆ ದಂಪತಿ ಬಿದ್ದು ಕ್ಷಮೆ ಸಹ ಕೋರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾನು ಗರ್ಭಿಣಿ ಇದ್ದೀನಿ. ತಿಳಿಯದೆ ತಪ್ಪು ಮಾಡಿದೆ ಎಂದು ಆಕೆ ವಿನಂತಿಸಿದ್ದಾಳೆ.

ಕಳೆದ ಶನಿವಾರ ಬೆಳ್ಳಂದೂರು ವೃತ್ತದಲ್ಲಿ ತಮ್ಮ ಸ್ಕೂಟರ್‌ಗೆ ಆಟೋ ಟಚ್‌ ಆಗಿದೆ ಎಂದು ಸಿಟ್ಟಿಗೆದ್ದು ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದು ಬಿಹಾರ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಪಂಚಾಯಣಿ ಮಿಶ್ರಾ ಅನುಚಿತ ವರ್ತನೆ ತೋರಿದ್ದರು. ಈ ನಡ‍ವಳಿಕೆ ಬಗ್ಗೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ಸಹ ದಾಖಲಾಯಿತು. ಬಳಿಕ ಬಂಧಿತಳಾಗಿ ಠಾಣಾ ಜಾಮೀನು ಪಡೆದು ಆಕೆ ಬಿಡುಗಡೆಗೊಂಡಿದ್ದರು.