ಡಿ.31ರಿಂದ ಬಸ್‌ ಮುಷ್ಕರ ? - ಸಿಎಂಗೆ ಮುಷ್ಕರದ ನೋಟಿಸ್‌ ಕೊಟ್ಟ ಕಾರ್ಮಿಕ ಸಂಘಟನೆ

| Published : Dec 10 2024, 10:09 AM IST

ksrtc

ಸಾರಾಂಶ

ವೇತನ ಮತ್ತು ಭತ್ಯೆಗಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಬೆಂಗಳೂರು : ವೇತನ ಮತ್ತು ಭತ್ಯೆಗಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಈ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ಅನ್ನು ಸಲ್ಲಿಸಲಾಗಿದೆ.

ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಸಮಾವೇಶಗಳು, ಪ್ರತಿಭಟನೆಗಳು, ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸಲು ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ದರ ಪರಿಷ್ಕರಣೆ ಆಗದ ಹೊರತು ವೇತನ ಪರಿಷ್ಕರಣೆ ಕಷ್ಟ ಸಾಧ್ಯ ಎಂದು ಆಡಳಿತ ವರ್ಗ ಹೇಳಿದೆ. ಈ ವಿಳಂಬ ಧೋರಣೆಯಿಂದ ಸಾರಿಗೆ ನೌಕರರು ಬೇಸರಗೊಂಡು ಅನಿವಾರ್ಯವಾಗಿ ಶಾಂತಿಯುತ ಮುಷ್ಕರದ ನಿರ್ಧಾರ ಕೈಗೊಂಡಿದ್ದಾರೆ. ಡಿ.31ರ ನಂತರ ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ನೋಟಿಸ್ ಪತ್ರದಲ್ಲಿ ಸಮಿತಿ ತಿಳಿಸಿದೆ.

ಸಾರಿಗೆ ನೌಕರರ ಬೇಡಿಕೆಗಳು

- ಹಿಂದಿನ ವೇತನ ಹೆಚ್ಚಳದ 38 ತಿಂಗಳ ಬಾಕಿ ಬಿಡುಗಡೆ.

- ಮೂಲ ವೇತನಕ್ಕೆ ಶೇ.25ರಷ್ಟು ವೇತನ ಹೆಚ್ಚಸಿ, ಶೇ.31ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ವೇತನ ಶ್ರೇಣಿ ಸಿದ್ಧಪಡಿಸಬೇಕು.

- ನೌಕರರ ಭತ್ಯೆಗಳನ್ನು 5 ಪಟ್ಟು ಹೆಚ್ಚಿಸಬೇಕು.

- ಪ್ರತಿ ತಿಂಗಳು 2,000 ರು. ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಬೇಕು.

- ಬಸ್ ನಿಲ್ದಾಣ, ಘಟಕಗಳಲ್ಲಿ ಸೂಕ್ತ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

- ಶಕ್ತಿ ಯೋಜನೆಯಿಂದ ಆಗುತ್ತಿರುವ ಶಿಕ್ಷೆ, ಕಿರುಕುಳ ಸಮಸ್ಯೆ ಪರಿಹರಿಸಬೇಕು.

- ನೌಕರರ ಮುಂಬಡ್ತಿಗೆ ಕ್ರಮ ಕೈಗೊಳ್ಳಬೇಕು.

- ಹೆಚ್ಚುವರಿ ಕೆಲಸದ ಅವಧಿಗೆ ಒಟಿ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳು.