ಚಿಕ್ಕಮಗಳೂರು : ಕರ್ನಾಟಕದ 6 ನಕ್ಸಲರು ಇಂದು ಶರಣಾಗತಿ : 2 ದಶಕಗಳ ಸಶಸ್ತ್ರ ಹೋರಾಟಕ್ಕೆ ತೆರೆ

| Published : Jan 08 2025, 07:29 AM IST

naxals

ಸಾರಾಂಶ

ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ 6 ಮಂದಿ ನಕ್ಸಲರು ಬುಧವಾರ ಶರಣಾಗತಿಗೆ ಸಮ್ಮತಿಸಿದ್ದಾರೆ.

ಚಿಕ್ಕಮಗಳೂರು : ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ 6 ಮಂದಿ ನಕ್ಸಲರು ಬುಧವಾರ ಶರಣಾಗತಿಗೆ ಸಮ್ಮತಿಸಿದ್ದಾರೆ. ಹೀಗಾಗಿ ಹಲವು ದಶಕಗಳ ಕಾಲ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ನಕ್ಸಲ್ ಚಳವಳಿ ಬಹುತೇಕ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದೆ.

ಮುಂಡಗಾರು ಲತಾ, ಸುಂದರಿ ಕುಟ್ಟೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ, ಟಿ. ಎನ್. ಜೀಶ್ ಅಲಿಯಾಸ್ ಜಯಣ್ಣ ಬುಧವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಮುಂದೆ ಶರಣಾಗಲಿದ್ದಾರೆ. ಸರ್ಕಾರ- ನಕ್ಸಲರ ಮಧ್ಯ ಮಧ್ಯಸ್ಥಿಕೆ ವಹಿಸಿರುವ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್‌. ಅಶೋಕ್ ಶರಣಾಗತಿ ವಿಷಯ ಖಚಿತಪಡಿಸಿದ್ದಾರೆ.

ಬೆಳಗ್ಗೆ ಆಗಮನ:

ಬೆಳಗ್ಗೆ 10 ಗಂಟೆ ವೇಳೆಗೆ 6 ಮಂದಿ ನಕ್ಸಲೀಯರು ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಅವರಿಗೆ ಪ್ರವಾಸಿ ಮಂದಿರದ ಬಳಿ ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರು ಸ್ವಾಗತ ಕೋರಲಿದ್ದಾರೆ. ನಕ್ಸಲರನ್ನು ಅವರ ಸಂಬಂಧಿಕರು ಭೇಟಿ ಮಾಡಲಿದ್ದಾರೆ. ಬಳಿಕ ನಕ್ಸಲರನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಎದುರು ಹಾಜರುಪಡಿಸಲಿದ್ದಾರೆ. ಪೊಲೀಸರು ನಕ್ಸಲರನ್ನು ವಶಕ್ಕೆ ಪಡೆದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಜಿಲ್ಲಾಡಳಿತದ ತಾವು ಸಮಾಜದ ಮುಖ್ಯ ವಾಹಿನಿಗೆ ಬರುವುದಾಗಿ ನಕ್ಸಲೀಯರು ಪತ್ರ ಬರೆದ ಹಿನ್ನೆಲೆಯಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಅನ್ವಯವಾಗುವಂತೆ 18 ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರು. ಈ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿಸಸಲಾಗಿತ್ತು. ಕೆಲವು ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ನಕ್ಸಲರು ಬರೆದ ಪತ್ರದಲ್ಲಿ ಏನಿದೆ?:

ನಕ್ಸಲ್ ಪುನರ್ವಸತಿ ಸಮಿತಿಗೆ ಆರು ಮಂದಿ ನಕ್ಸಲೀಯರು ಜ.3 ರಂದು ಹಲವು ಬೇಡಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಇದೇ ಪತ್ರ ಕೇರಳ ಹಾಗೂ ತಮಿಳುನಾಡು ರಾಜ್ಯ ಸರ್ಕಾರಕ್ಕೂ ಸಲ್ಲಿಸಲಾಗಿದೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ಸಮಾಜ, ಸರ್ಕಾರ ಹಾಗೂ ಜನಪರ ಸಂಘಟನೆಗಳುಏನುಬಯಸುತ್ತಿವೆ ಎಂಬುದು ಅರಿವಾಗಿದೆ.

 ದೇಶದ ಇಂದಿನ ಸಂದರ್ಭ, ಚಳವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲ್ಲ ಗಮನಿಸಿ ಸಶಸ್ತ್ರ ಹೋರಾಟದ ಮಾರ್ಗ ಬದಲಾಯಿಸಿ ಪ್ರಜಾ ತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು. ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆ ಆಗಿದೆ. ನಾವು ಯಾವುದೇ ಒತ್ತಡವಿಲ್ಲದೆ ಸ್ವ ಇಚ್ಛೆಯಿಂದ ಮುಖ್ಯ ವಾಹಿನಿಗೆ ಬರಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಶರಣಗಾಗುವ ನಕ್ಸಲರು

* ಮುಂಡಗಾರು ಲತಾ

* ಸುಂದರಿ ಕುಟ್ಲೂರು

* ವನಜಾಕ್ಷಿ ಬಾಳೆಹೊಳೆ

* ಮಾರಪ್ಪ ಅರೋಲಿ

* ಕೆ.ವಸಂತ

* ಟಿ.ಎನ್‌. ಜೀಶ್‌

ಬೆಳಗ್ಗೆ 10ಕ್ಕೆ ಚಿಕ್ಕಮಗಳೂರಿಗೆ ಆರು ನಕ್ಸಲರು ಆಗಮನ ಕುಟುಂಬ ಸದಸ್ಯರ ಜತೆ ಚರ್ಚೆ. ಬಳಿಕ ಡೀಸಿ ಕಚೇರಿಗೆ ಶರಣಾಗತಿಯ ಬಳಿಕ ವಶಕ್ಕೆ ಪಡೆಯಲಿರುವ ಪೊಲೀಸರು, ನಂತರ ಕೋರ್ಟ್‌ಗೆ ಹಾಜರು