ಕಟಕಟೆಯಲ್ಲಿ ಸಿಎಂ, ಡಿಸಿಎಂ ವಿಚಾರಣೆ..! - ಬೆಲೆ ಏರಿಕೆ ವಿರೋಧಿ ಪ್ರತಿಭಟನೆ ವೇಳೆ ವ್ಯಂಗ್ಯ

| N/A | Published : Apr 04 2025, 06:31 AM IST

Siddaramaiah and DK Shivakumar

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟಕಟೆಯಲ್ಲಿ! ವಕೀಲರಾಗಿ ವಿಚಾರಣೆ ನಡೆಸಿದ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ!

  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟಕಟೆಯಲ್ಲಿ! ವಕೀಲರಾಗಿ ವಿಚಾರಣೆ ನಡೆಸಿದ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ!

ಇದು ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ವೇಳೆ ಬಿಜೆಪಿ ನಡೆಸಿದ ಅಣಕು ವಿಚಾರಣೆ.

ಧರಣಿಯಲ್ಲಿ ಬಿಜೆಪಿ ಸರ್ಕಾರ ವಿರುದ್ಧ ಆರೋಪಪಟ್ಟಿ ಬಿಡುಗಡೆ ಮಾಡಿತ್ತು. ಅದರ ಅಣುಕು ವಿಚಾರಣೆ ಗಮನಸೆಳೆಯಿತು. ಛಲವಾದಿ ನಾರಾಯಣಸ್ವಾಮಿ ವಿಚಾರಣೆ ನಡೆಸಿ ಸರ್ಕಾರದ ವಿರುದ್ಧ ವಿಭಿನ್ನವಾಗಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳೇ, ಉಪ ಮುಖ್ಯಮಂತ್ರಿಗಳೇ, ಇದು ಜನತಾ ನ್ಯಾಯಾಲಯವಾಗಿದ್ದು, ಪ್ರಶ್ನೆಗಳು ಗಂಭೀರ ಇವೆ. ಸಮಯೋಚಿತ ಉತ್ತರ ಕೊಡಿ. ಇಲ್ಲದಿದ್ದರೆ ಜನತಾ ನ್ಯಾಯಾಲಯದಲ್ಲಿ ಛೀಮಾರಿ ಹಾಕಲಾಗುತ್ತದೆ ಎಚ್ಚರಿಕೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಪಕ್ಕದಲ್ಲಿರುವ ಸಿದ್ದರಾಮಯ್ಯನವರ ನೆಟ್ಟು-ಬೋಲ್ಟ್ ಟೈಟ್‌ ಮಾಡಿದ್ದೀರಾ? ಯಾವಾಗ ಮಾಡುತ್ತೀರಿ, ನೆಟ್‌ಬೋಲ್ಡ್‌ ಬಿಚ್ಚುತ್ತೀರಾ? ಎಂಬ ಪ್ರಶ್ನೆಗೆ ಡಿ.ಕೆ.ಶಿವಕುಮಾರ್‌ ಮುಖವಾಡ ತೊಟ್ಟ ವ್ಯಕ್ತಿ ನೆಟ್ಟು-ಬೋಲ್ಟು ಬಿಚ್ಚಿಡುತ್ತೇನೆ. ಅತೀ ಶೀಘ್ರದಲ್ಲಿ ಎಂದರು.

ಇನ್ನು, ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರೇ ಬೆಲೆ ಏರಿಕೆ ಮಾಡಿದ್ದು ಏಕೆ? ಎಂದು ಕೇಳಿದಾಗ, ಸಿದ್ದರಾಮಯ್ಯ ಮುಖವಾಡ ತೊಟ್ಟ ವ್ಯಕ್ತಿ, ದುಡ್ಡು ಹೊಡೆಯೋದಕ್ಕೆ ಎಂದು ಉತ್ತರಿಸಿದರು. ಹೀಗೆ ಹಲವು ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯುತ್ತಾ ಸರ್ಕಾರ ವಿರುದ್ಧ ವ್ಯಂಗ್ಯವಾಗಿ ಟೀಕಿಸಲಾಯಿತು.