ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್‌ ಮುಂದಿನ 6 ದಿನ ರಾಜ್ಯದಲ್ಲಿ ಮಳೆ

| N/A | Published : May 01 2025, 10:32 AM IST

Cyclone

ಸಾರಾಂಶ

ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆರು ದಿನಗಳವರೆಗೆ ಬೆಂಗಳೂರು, ಕರಾವಳಿ ಭಾಗ ಹಾಗೂ ಮಲೆನಾಡು ಪ್ರದೇಶದ ಕೆಲವೆಡೆ ಸಾಮಾನ್ಯ ಮಳೆ ಸುರಿಯಲಿದೆ

ಬೆಂಗಳೂರು :  ಆಂಧ್ರಪ್ರದೇಶ ಭಾಗದ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಹಾಗೂ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆರು ದಿನಗಳವರೆಗೆ ಬೆಂಗಳೂರು, ಕರಾವಳಿ ಭಾಗ ಹಾಗೂ ಮಲೆನಾಡು ಪ್ರದೇಶದ ಕೆಲವೆಡೆ ಸಾಮಾನ್ಯ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ರಾಜ್ಯದಲ್ಲಿ ತಂಪೆರೆಯುವಂತೆ ಬುಧವಾರ ಹಲವೆಡೆ ಮಳೆ ಸುರಿದಿದೆ.

 ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿದ ಬೀದರ್‌, ಕಲಬುರಗಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಕೊಡಗು, ಹಾಸನ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರದ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. 

ಈ ಮಳೆ ಇನ್ನೂ ನಾಲ್ಕೈದು ದಿನಗಳವರೆಗೆ ಮುಂದುವರಿಯಲಿದೆ. ಮಳೆ ಜತೆಗೆ ಭಾರೀ ಗಾಳಿಯೂ ಬೀಸಲಿದೆ. ಬುಧವಾರ ಮಳೆಯಾದ ಕಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ.

ಗುರುವಾರ ಗಾಳಿ ವೇಗ ಹೆಚ್ಚಲಿದ್ದು, ಗಂಟೆಗೆ 50ರಿಂದ 60 ಕಿ.ಮೀ. ವೇಗದಲ್ಲಿ ಬೀಸಲಿದೆ. ಉತ್ತರ ಕರ್ನಾಟಕದ ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಾಳಿ ವೇಗ ಹೆಚ್ಚಿರಲಿದೆ. ಉಳಿದಂತೆ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗಾಳಿ ಪ್ರಮಾಣ ಇದ್ದರೂ, ಉತ್ತರ ಕರ್ನಾಟಕ ಭಾಗದಷ್ಟಿರುವುದಿಲ್ಲ.

ರಾಜ್ಯದಲ್ಲಿ ಮಳೆ ಪ್ರಭಾವ ಮೇ 6ರವರೆಗೆ ಇರಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳ ಕೆಲಭಾಗಗಳಲ್ಲಿ ಗಾಳಿ ಸಹಿತ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ.