ಸಾರಾಂಶ
ಹೆಬ್ರಿ ಸಮೀಪ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ನಡೆದ ಹಿನ್ನೆಲೆಯಲ್ಲಿ ಹಾಗೂ ಪಶ್ಚಿಮಘಟ್ಟ ಭಾಗದಲ್ಲಿ ನಕ್ಸಲರ ಚಲನವಲನ ಹೆಚ್ಚಾದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಹಾಗೂ ಸ್ಥಳೀಯ ಪೊಲೀಸರು ಕೂಂಬಿಂಗ್ ಕಾರ್ಯ ಚುರುಕುಗೊಳಿಸಿದ್ದಾರೆ.
ಚಿಕ್ಕಮಗಳೂರು : ಹೆಬ್ರಿ ಸಮೀಪ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ನಡೆದ ಹಿನ್ನೆಲೆಯಲ್ಲಿ ಹಾಗೂ ಪಶ್ಚಿಮಘಟ್ಟ ಭಾಗದಲ್ಲಿ ನಕ್ಸಲರ ಚಲನವಲನ ಹೆಚ್ಚಾದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಹಾಗೂ ಸ್ಥಳೀಯ ಪೊಲೀಸರು ಕೂಂಬಿಂಗ್ ಕಾರ್ಯ ಚುರುಕುಗೊಳಿಸಿದ್ದಾರೆ.
ನಕ್ಸಲೀಯರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇತರೆ ಈರ್ವರು ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮಕ್ಕೆ ಬಂದು ಹೋಗಿದ್ದು ದೃಢಪಟ್ಟಿದ್ದು, ಇನ್ನೊಂಡೆದೆ ನಕ್ಸಲ್ ನಾಯಕ ವಿಕ್ರಂಗೌಡ ಹೆಬ್ರಿ ಬಳಿ ಎನ್ಕೌಂಟರ್ಗೆ ಬಲಿಯಾಗಿದ್ದರ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತೆ ಚುರುಕಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಗಲು ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ. ಮುಂಡಗಾರು ಲತಾ ಇತ್ತೀಚೆಗೆ ಬಂದು ಹೋಗಿರುವ ಕಡೇಗುಂಡಿ ಹಾಗೂ ಕೆರೆಕಟ್ಟೆ, ಮೇಗೂರು, ಜಯಪುರ ಸುತ್ತಮುತ್ತ ಕೂಂಬಿಂಗ್ ನಡೆಯುತ್ತಿದೆ. ನಕ್ಸಲ್ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ 17 ಎಎನ್ಎಫ್ ತಂಡಗಳಿದ್ದು, ಈ ತಂಡಗಳ ಜತೆಗೆ ಸ್ಥಳೀಯ ಪೊಲೀಸರು ಸಹ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಗಡಿ ಭಾಗದಲ್ಲಿರುವ ಮಾರ್ಗಗಳಲ್ಲಿ ನಾಕಾ ಬಂಧಿ ವ್ಯವಸ್ಥೆ ಮಾಡಲಾಗಿದೆ. ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.