ಸಾರಾಂಶ
ವರದಕ್ಷಿಣೆ ಕಿರುಕುಳದ ಆರೋಪದ ಅಡಿ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಡಿವೈಎಸ್ಪಿಯೊಬ್ಬರ ವಿರುದ್ಧ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು : ವರದಕ್ಷಿಣೆ ಕಿರುಕುಳದ ಆರೋಪದ ಅಡಿ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಡಿವೈಎಸ್ಪಿಯೊಬ್ಬರ ವಿರುದ್ಧ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
41 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಐಎಸ್ಡಿಯ ಡಿವೈಎಸ್ಪಿ ಆರ್.ಶಂಕರಪ್ಪ(48) ಹಾಗೂ ಅವರ ಸ್ನೇಹಿತೆ ಜ್ಯೋತಿ(32) ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ
ದೂರುದಾರ ಮಹಿಳೆ 2003ರಲ್ಲಿ ಶಿಕ್ಷಕರಾಗಿದ್ದ ಶಂಕರಪ್ಪ ಅವರನ್ನು ಮದುವೆಯಾಗಿದ್ದರು. ಈ ವೇಳೆ ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ಬಳಿಕ ಶಂಕರಪ್ಪ ಅವರು ಶಿಕ್ಷಕ ವೃತ್ತಿ ಬಿಟ್ಟು ಪೊಲೀಸ್ ಇಲಾಖೆಗೆ ಸೇರಿದ್ದರು. ಬಳಿಕ ತನ್ನ ಅಂತಸ್ತಿಗೆ ತಕ್ಕಂತೆ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಜನವರಿಯಲ್ಲಿ ಶಂಕರಪ್ಪ ಅವರು ಜ್ಯೋತಿ ಎಂಬಾಕೆಯನ್ನು ಮದುವೆಯಾಗಿರುವುದು ಹೇಳಿದ್ದರು. ಈ ಸಂಬಂಧ ಜ್ಯೋತಿ ಜತೆಗೂ ಮಾತನಾಡಿದ್ದೆ. ಆ ವೇಳೆ ಆಕೆ ಸಹ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಪತಿ ಶಂಕರಪ್ಪ ಮತ್ತು ಜ್ಯೋತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.