ಸಾರಾಂಶ
‘ಧರ್ಮಸ್ಥಳ ಗ್ರಾಮದಲ್ಲಿನ ನೂರಾರು ಶವ ಹೂತ ಪ್ರಕರಣದಲ್ಲಿ ಜನರ ಭಾವನೆ ಕೆರಳಿಸುವಂತಹ ವರದಿಯ ಪ್ರಸಾರವನ್ನು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳು ಕೂಡಲೇ ನಿಲ್ಲಿಸಬೇಕು’ ಎಂದು ಎಚ್ಚರಿಸಿರುವ ಗೃಹ ಸಚಿವ ಡಾ। ಜಿ.ಪರಮೇಶ್ವರ್
ವಿಧಾನಸಭೆ : ‘ಧರ್ಮಸ್ಥಳ ಗ್ರಾಮದಲ್ಲಿನ ನೂರಾರು ಶವ ಹೂತ ಪ್ರಕರಣದಲ್ಲಿ ಜನರ ಭಾವನೆ ಕೆರಳಿಸುವಂತಹ ವರದಿಯ ಪ್ರಸಾರವನ್ನು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳು ಕೂಡಲೇ ನಿಲ್ಲಿಸಬೇಕು’ ಎಂದು ಎಚ್ಚರಿಸಿರುವ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು, ಈ ಎಚ್ಚರಿಕೆ ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವಗಳ ಪತ್ತೆ ಕುರಿತ ಎಸ್ಐಟಿ ತನಿಖೆಗೆ ಸಂಬಂಧಿಸಿ ಉತ್ತರಿಸಿದ ಡಾ। ಪರಮೇಶ್ವರ್, ಧರ್ಮಸ್ಥಳ ಗ್ರಾಮ ಪ್ರಕರಣದಲ್ಲೂ ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಭಾವನೆಗಳನ್ನು ಕೆರಳಿಸುವಂತಹ ವರದಿ ಮಾಡಲಾಗುತ್ತಿದೆ ಎಂದು ದೂರುಗಳು ಬಂದಿವೆ. ನಾವು ಅದನ್ನು ಗಮನಿಸಿದ್ದೇವೆ. ಹೀಗೆ ಅವಹೇಳನಕಾರಿಯಾಗಿ ಸುದ್ದಿ ಮಾಡುವವರು, ಭಾವನೆಗಳನ್ನು ಕೆರಳಿಸುವವರು ಈ ಕೂಡಲೇ ಅದನ್ನು ನಿಲ್ಲಿಸಬೇಕು. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರೆದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಧರ್ಮಸ್ಥಳ ಗ್ರಾಮದಲ್ಲಿ ಯೂಟ್ಯೂಬ್ ಚಾನೆಲ್ಗಳ 2 ಗುಂಪುಗಳು ಕಿತ್ತಾಡಿಕೊಂಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.
ಪರಮೇಶ್ವರ್ ಹೇಳಿದ್ದೇನು?
- ಯೂಟ್ಯೂಬರ್ಗಳಿಂದ ಜನರ ಭಾವನೆಗೆ ಧಕ್ಕೆ ಆಗಿದೆ ಎಂಬ ದೂರು ಬಂದಿವೆ
- ಸಾಮಾಜಿಕ ಜಾಲತಾಣಗಕ್ಕೆ ಕಡಿವಾಣ ಹಾಕದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳು
- ಈ ರೀತಿ ವರ್ತನೆ ಕೂಡಲೇ ಸ್ಥಗಿತಗೊಳಿಸಬೇಕು. ನಿರ್ಲಕ್ಷಿದಿದರೆ ಕಠಿಣ ಕ್ರಮ
- ಧರ್ಮಸ್ಥಳ ಗ್ರಾಮದ ಚರ್ಚೆ ವೇಳೆ ಗೃಹ ಸಚಿವ ಪರಮೇಶ್ವರ್ ತೀಕ್ಷ್ಣ ಎಚ್ಚರಿಕೆ