ಸಾರಾಂಶ
ಅಭಿವೃದ್ಧಿ ಯೋಜನೆಗಳಿಗೆ ಭೂಮಿ ನೀಡಿದ ರೈತರಿಗೆ ವಿತರಿಸುವ ಪರಿಹಾರ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರು : ಅಭಿವೃದ್ಧಿ ಯೋಜನೆಗಳಿಗೆ ಭೂಮಿ ನೀಡಿದ ರೈತರಿಗೆ ವಿತರಿಸುವ ಪರಿಹಾರ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ತಮ್ಮಿಂದ ವಶಪಡಿಸಿಕೊಂಡ ಜಮೀನಿಗೆ ವಿತರಿಸಿರುವ ಪರಿಹಾರಕ್ಕೆ ಜಿಎಸ್ಟಿ ಪಾವತಿಸುವಂತೆ ಸೂಚಿಸಿ ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ ಪ್ರಶ್ನಿಸಿ ನಗರದ ಆರ್.ಆಶಾ ಮತ್ತಿತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ, ಅರ್ಜಿದಾರ ರೈತರಿಗೆ ಇಷ್ಟವಿಲ್ಲದಿದ್ದರೂ ಅವರ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಭೂಮಿ ಕಳೆದುಕೊಂಡಿರುವ ಮತ್ತು ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರಿಗೆ ಪರ್ಯಾಯವಾಗಿ ನಷ್ಟ ಪರಿಹಾರ ನೀಡಲಾಗುತ್ತದೆ. ಭೂಮಿ ವಶಪಡಿಸಿಕೊಳ್ಳುವಾಗ ಅರ್ಜಿದಾರರು ಮತ್ತು ಕೆಐಎಡಿಬಿಇ ನಡುವೆ ಏರ್ಪಟ್ಟಿರುವ ಒಪ್ಪಂದ ಹಲವು ಷರತ್ತು ಒಳಗೊಂಡಿರಬಹುದು. ಆದರೆ ಅದಕ್ಕೂ ಅರ್ಜಿದಾರರಿಗೆ ನೀಡುವ ಪರಿಹಾರ ಮೊತ್ತಕ್ಕೂ ಸಂಬಂಧವಿಲ್ಲ. ರೈತರಿಗೆ ನೀಡಿದ ಪರಿಹಾರ ಮೊತ್ತಕ್ಕೆ ಜಿಎಸ್ಟಿ ವಿಧಿಸುವಂತಿಲ್ಲ ಎಂದು ಆದೇಶಿಸಿತು.
ಅಲ್ಲದೆ, ಅರ್ಜಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ರದ್ದುಪಡಿಸಿ ನ್ಯಾಯಪೀಠ ಆದೇಶಿಸಿದೆ.
ಪ್ರಕರಣವೇನು?:
ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಅರ್ಜಿದಾರರು ಬೆಂಗಳೂರಿನಲ್ಲಿ ಹೊಂದಿದ್ದ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಪರಿಹಾರ ವಿತರಿಸಿತ್ತು. ಆ ಪರಿಹಾರ ಮೊತ್ತಕ್ಕೆ ಜಿಎಸ್ಟಿ ಪಾವತಿಸುವಂತೆ ಅರ್ಜಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ನೀಡಿತ್ತು. ತಮ್ಮ ಪರಿಹಾರ ಧನಕ್ಕೆ ಜಿಎಸ್ಟಿ ಅನ್ವಯ ಸರಿಯಲ್ಲ ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದನ್ನು ವಾಣಿಜ್ಯ ತೆರಿಗೆ ಇಲಾಖೆ ಪರಿಗಣಿಸದಕ್ಕೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.